Home ಅಂಕಣಗಳು ದಲಿತರ ಮಗಳೂ ದೇಶದ ಮಗಳೇ…

ದಲಿತರ ಮಗಳೂ ದೇಶದ ಮಗಳೇ…

(ದೆಹಲಿಯಲ್ಲಿ ದಲಿತ ಮಗಳನ್ನು ರೇಪ್ ಮಾಡಿ ಸುಟ್ಟು ಹಾಕಿದ ಪೂಜಾರಿ. ಬಾಯಿ ಬಿಡದ ಜಾತಿವಾದಿ ಮಾಧ್ಯಮ ಹಾಗೂ ಸಮಾಜ)

ದೆಹಲಿಯಲ್ಲಿ‌ ತಾವು ಬ್ರಾಹ್ಮಣ ಸಮಾನರೆಂದು ಹೇಳಿಕೊಳ್ಳುವ ಭೂಮಿಹಾರ್ ಜಾತಿಯ ಯುವತಿ ನಿರ್ಭಯಾ ಮೇಲೆ ಕ್ರೂರವಾಗಿ ರೇಪ್ ಮಾಡಿದಾಗ ಇಡೀ ದೇಶದ ಮಾನವೀಯ ಮನಸ್ಸುಗಳು ಬೀದಿಯಲ್ಲಿ ದೀಪ ಹಚ್ಚಿ ಆಕ್ರೋಷ ವ್ಯಕ್ತಪಡಿಸಿದ್ದವು. ಕಳೆದ ವರ್ಷ ಹೈದರಾಬಾದಿನಲ್ಲಿ ರೆಡ್ಡಿ ಜಾತಿಯ ಯುವತಿ ದಿಶಾಳನ್ನು ರೇಪ್ ಮಾಡಿ ಕೊಂದ ಎರಡೇ ದಿನಗಳಲ್ಲಿ ಆ ನೀಚರ ಎನ್ ಕೌಂಟರ್ ಆಯಿತು. ಇಡೀ ದೇಶಕ್ಕೆ ದೇಶ ಸೇಡು ತೀರಿಸಿಕೊಂಡ ಆನಂದ ಅನುಭವಿಸಿತು.

ಆದರೆ ಹತ್ರಾಸ್ ದಲಿತ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದಾಗ ಠಾಕೂರ್ ಜಾತಿಯ ವಿಕೃತ ಕಾಮಿಗಳನ್ನು ಬಚಾವು‌ ಮಾಡಲು‌ ಸ್ವತಃ ಉತ್ತರಪ್ರದೇಶದ ಸರ್ಕಾರವೇ ಮುಂದಾಗಿ ಮಧ್ಯ ರಾತ್ರಿಯಲ್ಲಿ ಆ ಯುವತಿಯನ್ನು ಪೊಲಿಸರೇ ಸುಟ್ಟು ಹಾಕಿದರು. ಶವಸಂಸ್ಕಾರವೇ ಆಗಲಿಲ್ಲ.

ಉನ್ನಾವೋ ದಲಿತ ಯುವತಿಯನ್ನು ಬಿಜೆಪಿ ಶಾಸಕ ಕುಲದೀಪ್ ಸೇಂಗಾರ್ ರೇಪ್ ಮಾಡಿದ್ದಾನೆಂದು ದೂರು ದಾಖಲಾದಾಗ ಆತನನ್ನು ಅರೆಸ್ಟ್ ಮಾಡಲಿಲ್ಲ. ಬದಲಾಗಿ ದಲಿತ ಯುವತಿಯ ತಂದೆಯನ್ನು ಲಾಕಪ್ಪಿನಲ್ಲಿಯೇ ಮುಗಿಸಲಾಯಿತು. ಅವಳ ವಾಹನಕ್ಕೆ ಅಪಘಾತ ಮಾಡಿಸಿ ಚಿಕ್ಕಪ್ಪನನ್ನು ಕೊಲ್ಲಲಾಯಿತು. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಹೀಗೆ ದಿನ ಒಂದಕ್ಕೆ ಮೂರು ದಲಿತ ಯುವತಿಯರ ಮೇಲೆ ರೇಪ್ ಆಗುತ್ತದೆಂದು ಸರ್ಕಾರಿ‌ ದಾಖಲೆಗಳೇ ಹೇಳುತ್ತಿವೆ.

ಈಗ ದೆಹಲಿಯ ನಂಗಲಿ ಎಂಬ ಹಳ್ಳಿಯಲ್ಲಿ 9 ವರ್ಷದ ದಲಿತ ಬಾಲಕಿಯನ್ನು ಹರಿದು ಮುಕ್ಕಿ ಸುಡಕಾಗಿದೆ. ಅಂದು ಆ ಬಾಲಕಿ ತಂಪು ನೀರಿಗಾಗಿ ನಂಗಲಿಯ ಮನೆಯ ಮುಂದಿದ್ದ ಚಿತಾಗಾರಕ್ಕೆ ತೆರಳಿದ್ದಾಳೆ. ಹಾಗೆ ತೆರಳಿದ ಮಗಳು ಎರಡು ತಾಸಾದರೂ ಮನೆಗೆ ಮರಳಲಿಲ್ಲವಲ್ಲ ಎಂದು ತಾಯಿ ಚಿತಾಗಾರದ ಬಳಿ ಮಗಳನ್ನು ಹುಡುಕುತ್ತಿರುವಾಗ ಚಿತಾಗಾರದ ಹೆಣಗಳನ್ನು ಕೈಲಾಸಕ್ಕೆ ಮುಟ್ಟಿಸುವ ಪೂಜಾರಿ ರಾಧೆಶ್ಯಾಮ್ ತಾಯಿಗೆ ಮಗಳ‌ ಶವವನ್ನು ತೋರಿಸಿದ್ದಾನೆ. “ನೀರು ಹಿಡಿದುಕೊಳ್ಳುವಾಗ ವಿದ್ಯುತ್ ಶಾಕ್ ತಗುಲಿ ತೀರಿಕೊಂಡಿದ್ದಾಳೆ” ಎಂದು ಪೂಜಾರಿ ರಾಧೆಶ್ಯಾಮ್ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ ಈ ವಿಷಯ ಪೊಲೀಸರಿಗೆ ತಿಳಿಸಬೇಡ ಅವರು ಪೋಸ್ಟ್ ಮಾರ್ಟಂ ಹೆಸರಿನಲ್ಲಿ ನಿನ್ನ ಮಗಳ ಅಂಗಾಂಗಳನ್ನು ಕದಿಯುತ್ತಾರೆಂದು ಭಯ ಹುಟ್ಟಿಸಿದ್ದಾನೆ. ಅಷ್ಟಕ್ಕೂ ಸಮಾಧಾನಗೊಳ್ಳದೆ ತಪ್ಪು ಮಾಡಿದ ಕಳ್ಳನಂತೆ ಆ ತಾಯಿ ತನ್ನ ಗಂಡನನ್ನು ಕರೆತರಲು ಹೋದಾಗ ಮಗುವನ್ನು ಚಿತಾಗಾರದಲ್ಲಿಯೇ ಸುಟ್ಟು ಹಾಕಿದ್ದಾನೆ ಪಾಪಿ. ಆ ನತದೃಷ್ಟೆಯ ತಾಯಿ ತನ್ನ ಮಗಳ ತುಟಿ ನೀಲಿಯಾಗಿತ್ತು, ಮೊಳಕೈ ಮತ್ತು ಮುಂಗೈ ‌ಮೇಲೆ ಗಾಯವಾಗಿ ರಕ್ತ ಸುರಿಯುತ್ತಿದ್ದದ್ದನ್ನು ಕಣ್ಣಾರೆ ಕಂಡಿದ್ದಾಳೆ. ಮತ್ತೊಂದು‌ ದಲಿತ ಮಗಳು ರೇಪ್ ಆಗಿ ಸುಟ್ಟು ಕರಕಲಾಗಿದ್ದಾಳೆ.

ಈಗ ಹೇಳಿ ನಿಮಗ್ಯಾರಿಗೂ ಬೀದಿಯಲ್ಲಿ ದೀಪ ಹಚ್ಚಬೇಕೆನಿಸುತ್ತಿಲ್ಲವೇ? ಎನ್ ಕೌಂಟರ್ ಮಾಡಿಬಿಡಿ ಎಂದು ಹೂಂಕರಿಸುವ ತಾಕತ್ತಿಲ್ಲವೇ? ಮರಣದಂಡನೆ ಎನ್ನಲು ಬಾಯಿ‌ ಬರುತ್ತಿಲ್ಲವೇ?

ಜಾತಿ ನಿಮ್ಮ ಬಾಯಿಯಲ್ಲಿಲ್ಲವಷ್ಟೇ. ನಿಮ್ಮ ರಕ್ತ ನರನಾಡಿಗಳಲ್ಲೆಲ್ಲಾ ಜಾತಿ ಉಕ್ಕಿ ಹರಿಯುತ್ತಾ ಜೀವಂತವಾಗಿದೆ. ನಿಮ್ಮ‌ ಜಾತಿವಾದಿ ಮನಸ್ಥಿತಿಗೆ ನನ್ನ ಧಿಕ್ಕಾರ. Rest in peace.

Join Whatsapp
Exit mobile version