ಸ್ವಚ್ಚ ಭಾರತ | ಛಲವಾದಿಪಾಳ್ಯದಲ್ಲಿ ನೋಡಿದರೆ ಬಿಜೆಪಿ ಬಂಡವಾಳ ಗೊತ್ತಾಗುತ್ತದೆ: ಹೆಚ್.ಡಿ.ಕುಮಾರಸ್ವಾಮಿ

Prasthutha|

ಬೆಂಗಳೂರು: ಸ್ವಚ್ಚ ಭಾರತ ಮತ್ತು ಅಭಿವೃದ್ಧಿ ಬಗ್ಗೆ ದೊಡ್ಡದಾಗಿ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ನಾಯಕರು, ಬಿಬಿಎಂಪಿಗೆ ಅನತಿ ದೂರದಲ್ಲಿರುವ ಛಲವಾದಿಪಾಳ್ಯಕ್ಕೆ ಬಂದು ನೋಡಬೇಕು. ಅವರ ಬಂಡವಾಳ ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

- Advertisement -

ಚಾಮರಾಜಪೇಟೆಯ ಛಲವಾದಿಪಾಳ್ಯದಲ್ಲಿ ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿ ಇರುವ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಇಲ್ಲ. ಮಹಿಳೆಯರು, ಮಕ್ಕಳು ಸಾರ್ವಜನಿಕ ಶೌಚಾಲಯವನ್ನೇ ಬಳಸಬೇಕಾದ ದುಸ್ಥಿತಿ ಇದೆ. ಇದಾ ಅಭಿವೃದ್ಧಿ? ಇದಾ ಸ್ವಚ್ಚ ಭಾರತ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆ ಕೋಟಿ ಕೋಟಿ ಹರಿದುಬರುತ್ತಿದೆ. ಆ ಹಣವೆಲ್ಲ ಎಲ್ಲಿ ಹೋಗುತ್ತಿದೆ? ಯಾರ ಕಿಸೆ ಸೇರುತ್ತಿದೆ? ಎನ್ನುವುದು ಗೊತ್ತಿದೆ. ಬಿಜೆಪಿ ಅವರು ಕೇವಲ ಬಾಯಿಮಾತಿನಲ್ಲಿ ಸ್ವಚ್ಚ ಭಾರತ, ಬೆಂಗಳೂರು ಅಭಿವೃದ್ಧಿ ಎಂದು ಹೇಳುತ್ತಾ ಜನರನ್ನು ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಮಂಕುಬೂದಿ ಎರಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಮಹಾನ್ ಇತಿಹಾಸ ಇದೆ. ಆ ಇತಿಹಾಸವನ್ನು ಕಾಪಾಡಿಕೊಳ್ಳುವುದು ಹೀಗೆನಾ? ಅನೇಕರು ಈ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿರುವವರೆಲ್ಲ ಬಡವರೇ. ಶ್ರಮಜೀವಿಗಳು. ಆದರೆ ಇವರೆಲ್ಲರೂ ಶೌಚಾಲಯ ಸೌಲಭ್ಯವೂ ಇಲ್ಲದ ದುಸ್ಥಿತಿಯಲ್ಲಿ ಇದ್ದಾರೆ. ಬೆಂಗಳೂರಿನ ಅನೇಕ ಕಡೆ ಇದೇ ಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.

ಇದು ಕೇವಲ ಛಲವಾದಿ ಪಾಳ್ಯದ ಕಥೆ ಅಲ್ಲ. ಅನೇಕ ಭಾಗದಲ್ಲಿ ಇಂಥ ಸಮಸ್ಯೆ ಇದೆ. ತಗಡಿನ ಶೀಟಿನ ಅಡಿ ಸಣ್ಣ ಗುಡಿಸಲುಗಳಲ್ಲಿ ಜನರು ಜೀವನ ಮಾಡುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರಕಾರ ತಾರತಮ್ಯ ಮಾಡುತ್ತಿದೆ. ಶ್ರೀಮಂತರು ವಾಸ ಮಾಡುವ ಪ್ರದೇಶಗಳಿಗೆ ಒತ್ತು ಕೊಟ್ಟು ಬಡವರು ವಾಸ ಮಾಡುವ ಬಡಾವಣೆಗಳನ್ನು ಕಡೆಗಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದ್ದಾರೆ.

ಧರ್ಮ‌ಧರ್ಮಗಳ ನಡುವೆ ಸಂಘರ್ಷ ತಂದಿಟ್ಟಿದೆ ಬಿಜೆಪಿ. ಆ ಪಕ್ಷ ದೇಶಕ್ಕೆ ಮಾರಕ. ಎಲ್ಲ ಧರ್ಮದ ಜನ ಒಬ್ಬ ತಾಯಿ ಮಕ್ಕಳಂತೆ ಬಾಳಬೇಕಿದೆ. ಬಿಜೆಪಿ ಮುಸ್ಲಿಮರನ್ನು ಕೆರಳಿಸುವ ರೀತಿ ಮಾಡುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಅದರ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಯುವಕರಿಗೆ ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದ್ದಾರೆ.

ಜಾತ್ಯತೀತ ಜನತಾದಳಕ್ಕೆ ಒಂದು ಅವಕಾಶ ಕೊಡಿ. ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತೇನೆ. ಮೆಟ್ರೋ, ವರ್ತುಲ ರಸ್ತೆ, ಜೆ ನರ್ಮ್, ಬೆಂಗಳೂರಿಗೆ 9 ಟಿಎಂಸಿ ನೀರು ಹೀಗೆ ಅನೇಕ ಯೋಜನೆಗಳನ್ನು ಕಾರ್ಯಗತ ಮಾಡಿದ್ದು ನಮ್ಮ ಪಕ್ಷವೇ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಿಜೆಪಿ ಸರಕಾರ ಎಲ್ಲ್ಲಾ ರೀತಿಯಲ್ಲೂ ಹಣ ಕೊಳ್ಳೆ ಹೊಡೆಯುತ್ತಿದೆ. ಅದಕ್ಕೆ ಸಾಕ್ಷಿ ಇಬ್ಬರು ಉನ್ನತ ಅಧಿಕಾರಿಗಳ ಬಂಧನ. ಆದರೆ, ಸರಕಾರ ಜನರ ಒಳಿತಿನ ಬಗ್ಗೆ ಚಿಂತೆ ಮಾಡುತ್ತಿಲ್ಲ. ಮುಂದಿನ ದಿನದಲ್ಲಿ ಬಿಬಿಎಂಪಿ ಚುನಾವಣೆ ಇದೆ. ನಂತರ ವಿಧಾನಸಭೆ ಚುನಾವಣೆ ಇದೆ. ಆ ಸಮಯದಲ್ಲೂ ಬಿಜೆಪಿಗೆ ತಕ್ಕ ಉತ್ತರ ಕೊಡಬೇಕು ಎಂದು ಜನರಲ್ಲಿ ಅವರು ಮನವಿ ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ಯಾವ ರೀತಿ ಆಡಳಿತ ಮಾಡಿದ್ದಾರೆ ಎನ್ನುವುದು ನೋಡಿದ್ದೇವೆ. 10 ವರ್ಷ ಯಾವ ರೀತಿ ಎರಡು ರಾಷ್ಟ್ರೀಯ ಪಕ್ಷ ಆಡಳಿತ ಮಾಡಿದ್ದಾರೆ ಎನ್ನುವುದೂ ಗೊತ್ತಿದೆ. ಇನ್ನಾದರೂ ರಾಷ್ಟ್ರೀಯ ಪಕ್ಷಗಳನ್ನು ನಂಬುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿಗಳು ನುಡಿದಿದ್ದಾರೆ.

ಐದು ವರ್ಷದ ಸ್ವತಂತ್ರ ಆಡಳಿತ ನೀಡಿ. ಉತ್ತಮ ಕಾರ್ಯಕ್ರಮಗಳನ್ನು ಕೊಡುತ್ತೇನೆ. ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಜೆಡಿಎಸ್ ನಗರ ಘಟಕ ಅಧ್ಯಕ್ಷ ಆರ್ ಪ್ರಕಾಶ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ, ಹಿರಿಯ ನಾಯಕಿ ರೂಥ್ ಮನೋರಮಾ, ಕ್ಷೇತ್ರದ ಮುಖಂಡ ಇಮ್ರಾನ್ ಪಾಶ ಸೇರಿ ಅನೇಕ ಮುಖಂಡರು ಪಾಲ್ಗೊಂಡಿದ್ದರು.

Join Whatsapp
Exit mobile version