Home ಟಾಪ್ ಸುದ್ದಿಗಳು ಜಮ್ಮು ಕಾಶ್ಮೀರ | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ; ಕಾಂಗ್ರೆಸ್ ಆಕ್ರೋಶ

ಜಮ್ಮು ಕಾಶ್ಮೀರ | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ; ಕಾಂಗ್ರೆಸ್ ಆಕ್ರೋಶ

ನವದೆಹಲಿ: ಜಮ್ಮು ಕಾಶ್ಮೀರ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಮೊದಲೇ ಐವರು ಶಾಸಕರಾಗಿ ನಾಮನಿರ್ದೇಶನವಾಗಿದ್ದು, ಈ ಐವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.


ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಐವರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಗೆ ತಿದ್ದುಪಡಿಗಳ ಭಾಗವಾಗಿ ಇಬ್ಬರು ಮಹಿಳೆಯರು, ಇಬ್ಬರು ಕಾಶ್ಮೀರಿ ಪಂಡಿತರು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ ಆಗಮಿಸಿದ ನಿರಾಶ್ರಿತ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.


90 ಸ್ಥಾನಗಳಿಗೆ ಚುನಾವಣೆ ನಡೆದರೂ ಐವರು ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇರುವ ಕಾರಣ ಜಮ್ಮು ಕಾಶ್ಮೀರ ವಿಧಾನಸಭೆಯ ಒಟ್ಟು ಶಾಸಕರ ಬಲಾಬಲ 95ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಹುಮತಕ್ಕೆ 48 ಸದಸ್ಯರ ಬೆಂಬಲ ಬೇಕು. ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಈ ಐವರ ಪಾತ್ರ ಭಾರೀ ಮಹತ್ವ ಪಡೆದಿದೆ.


ಸರ್ಕಾರ ರಚನೆಗೂ ಮೊದಲೇ ಗವರ್ನರ್ ನಾಮನಿರ್ದೇಶನ ಮಾಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರವೀಂದ್ರ ಶರ್ಮಾ, ಐವರು ಶಾಸಕರ ನಾಮ ನಿರ್ದೇಶನವನ್ನು ನಾವು ವಿರೋಧಿಸುತ್ತೇವೆ. ಸರ್ಕಾರ ರಚನೆಗೂ ಮೊದಲೇ ನಾಮ ನಿರ್ದೇಶನ ಅಗತ್ಯವಿಲ್ಲ. ಇಂತಹ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಅಲ್ಲದೇ ಜನರ ತೀರ್ಪನ್ನು ಅಗೌರವಿಸುವ ನಡೆ ಎಂದು ಕಿಡಿಕಾರಿದ್ದಾರೆ.


ಕೇಂದ್ರಾಡಳಿತ ರಾಜ್ಯವಾಗಿರುವ ಜಮ್ಮು ಕಾಶ್ಮೀರ ಪುದುಚೇರಿ ವಿಧಾನಸಭಾ ಮಾದರಿಯಲ್ಲಿ ರಚನೆಯಾಗಿದೆ. ಅಲ್ಲಿ ಮೂವರನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡಬಹುದು. ಅವರು ಚುನಾಯಿತ ಶಾಸಕರಂತೆ ಕೆಲಸ ಮಾಡುತ್ತಾರೆ ಮತ್ತು ಮತದಾನ ಮಾಡುವ ಹಕ್ಕನ್ನು ಸಹ ಹೊಂದಿದ್ದಾರೆ.

Join Whatsapp
Exit mobile version