Home ಜಾಲತಾಣದಿಂದ 40ಶೇ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಯುವ ಶಕ್ತಿ ಮುಂದಾಗಬೇಕು: ಶಶಿ ‌ತರೂರ್

40ಶೇ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಯುವ ಶಕ್ತಿ ಮುಂದಾಗಬೇಕು: ಶಶಿ ‌ತರೂರ್

►“ನನ್ನ ಮತ ಉತ್ತಮ ಕೌಶಲ್ಯ, ಉಜ್ವಲ ಭವಿಷ್ಯ” ಕುರಿತು ಯುವ ಮತದಾರರೊಂದಿಗೆ ಸಂವಾದ

ಬೆಂಗಳೂರು: ಯುವ ಜನಾಂಗ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಬೆಂಬಲಿಸಬೇಕು. ಸ್ವಚ್ಛ ಆಡಳಿತ ನೀಡುವ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.

ನಗರದ ಹೊರ ವಲಯದ ಭಾರತೀಯ ವಾಯುಪಡೆ ಸಮೀಪದ ಹೊಸಹಳ್ಳಿಯಲ್ಲಿ ಆಯೋಜಿಸಿದ್ದ “ಯುವ ಮತ” ಅಭಿಯಾನದಡಿ “ನನ್ನ ಮತ ಉತ್ತಮ ಕೌಶಲ್ಯ, ಉಜ್ವಲ ಭವಿಷ್ಯಕ್ಕಾಗಿ” ಎಂಬ ಯುವ ಜನಾಂಗದೊಂದಿಗೆ ಸಂವಾದ ನಡೆಸಿ  ಮಾತನಾಡಿದ ಅವರು, ರಾಜ್ಯದಲ್ಲಿ ಶೇ 40% ಭ್ರಷ್ಟ ಸರ್ಕಾರ ಅಧಿಕಾರದಲ್ಲಿದ್ದು, ಇಂತಹ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಯುವ ಸಮೂಹ ಹೋರಾಟದ ನೇತೃತ್ವ ವಹಿಸಬೇಕು ಎಂದರು.

ಭಾರತ ಜಾತ್ಯತೀತ ದೇಶ. ಹೀಗಾಗಿ ಎಲ್ಲಾ ಜಾತಿ, ಧರ್ಮ, ಎಲ್ಲರನ್ನೊಳಗೊಂಡ ಸರ್ಕಾರ ಇಂದಿನ ಅಗತ್ಯ. ಯುವ ಜನಾಂಗ ಅಭಿವೃದ್ಧಿ ಪರ ನಿಲುವು ಹೊಂದಬೇಕು. ಭವ್ಯ ಭವಿಷ್ಯದ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ತಮ್ಮ ಆಲೋಚನೆಗಳಿಗೆ ಅನುಗುಣವಾದ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

ಭಾರತ ವೈವಿಧ್ಯಮಯ ದೇಶ. ಅದರಲ್ಲೂ ಕರ್ನಾಟಕ ವೈವಿಧ್ಯತೆಯ ತವರೂರು‌. ಸಾಧುಗಳು, ಸೂಫಿ-ಸಂತರ ನಾಡು. ಹೀಗಾಗಿ ಕರ್ನಾಟಕದಿಂದ ಬಹುತ್ವದ ಸಂದೇಶ ಮೊಳಗಬೇಕು. ಸಂಕುಚಿತ ಮನಸ್ಥಿತಿಯ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ, ಎಐಸಿಸಿ ಪ್ರಧಾನ‌ ಕಾರ್ಯದರ್ಶಿ ಅಭಿಶೇಖ್ ದತ್ತ್, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರನ್ನು  ಸೆಳೆಯಲು ಉಸ್ತುವಾರಿ ನಿರ್ವಹಿಸುತ್ತಿರುವ ಎಂ.ಎಸ್. ರಕ್ಷಾ ರಾಮಯ್ಯ ಉಪಸ್ಥಿತರಿದ್ದರು.

Join Whatsapp
Exit mobile version