ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ಕಟ್ಟಡ: ನಿವಾಸಿಗಳ ಸ್ಥಳಾಂತರ

Prasthutha|

► ಕಟ್ಟಡ ಕೆಡವಲು ಬಿಬಿಎಂಪಿ ನಿರ್ಧಾರ

- Advertisement -

ಬೆಂಗಳೂರು: ನಗರದಲ್ಲಿ ಮತ್ತೊಂದು ಕಟ್ಟಡ ವಾಲಿದ್ದು, ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಕಟ್ಟಡವನ್ನು ಕೆಡವಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಮಲಾ ನಗರದಲ್ಲಿನ ನಾಲ್ಕು ಅಂತಸ್ತಿನ ಕಟ್ಟಡ ವಾಲಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಕಟ್ಟಡದ ನಿವಾಸಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಎಲ್ಲರೂ ಮನೆಯಿಂದ ಹೊರಬಂದರು. ಅಗ್ನಿಶಾಮಕ ದಳಕ್ಕೂ ಮಾಹಿತಿ ರವಾನಿಸಲಾಯಿತು. ಸ್ಥಳದಲ್ಲಿ ಸಿಬ್ಬಂದಿ ಹಾಗೂ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

“ ಈ ಕಟ್ಟಡಗಳಲ್ಲಿ ವಾಸಿಸುತ್ತಿದ್ದ ಎಲ್ಲ ಜನರನ್ನು ಮತ್ತು ಸುತ್ತಮುತ್ತಲಿನವರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಅಂತಹ ಕುಟುಂಬಗಳಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ಭಾರೀ ಮಳೆ ಮತ್ತು ಕಟ್ಟಡಕ್ಕೆ ಹಾಕಿರುವ ಕಳಪೆ ಅಡಿಪಾಯದಿಂದಾಗಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಆರೋಪ ಮಾಡಿದ್ದಾರೆ.

- Advertisement -


ಬೆಂಗಳೂರಿನಲ್ಲಿ ಸೋಮವಾರದಿಂದ ಭಾರೀ ಮಳೆಯಾಗಿದ್ದು, ನಗರದಾದ್ಯಂತ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಭಾನುವಾರವೂ ನಗರದಲ್ಲಿ ಭಾರೀ ಮಳೆಯಾಗಿದ್ದು, ಮರಗಳು ಉರುಳಿಬಿದ್ದು ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ನಗರದ ಕೆಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಸೆಪ್ಟೆಂಬರ್ 27 ರಂದು ಬೆಂಗಳೂರಿನ ಲಕ್ಕಸಂದ್ರ ಪ್ರದೇಶದಲ್ಲಿ 70 ವರ್ಷಗಳಷ್ಟು ಹಳೆಯದಾದ ಕಟ್ಟಡ ನೆಲಕ್ಕುರುಳಿತ್ತು. ಕಟ್ಟಡದಲ್ಲಿದ್ದ ಸುಮಾರು 50 ಜನರು ಅದೃಷ್ಟವಶಾತ್ ಪಾರಾಗಿದ್ದರು.

Join Whatsapp