ಮುಖ್ಯಮಂತ್ರಿ ಕುಟುಂಬದ ಭ್ರಷ್ಟಾಚಾರದ ವಿರುದ್ಧವಾಗಿದೆ ನನ್ನ ನಿರಂತರ ಹೋರಾಟ । ಯತ್ನಾಳ್

Prasthutha|

‘ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯದ ವಿರುದ್ಧ ನನ್ನ ನಿರಂತರ ಹೋರಾಟ ಮುಂದುವರಿಯಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

- Advertisement -

ಸೋಮವಾರ ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಯತ್ನಾಳ್ ‘ಮುಖ್ಯಮಂತ್ರಿ ಮಾತ್ರವಲ್ಲ, ಅವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಎಲ್ಲ ವರ್ಗಾವಣೆ ಮುಖ್ಯಮಂತ್ರಿ ಮನೆಯಿಂದಲೇ ಆಗುವುದು. ಅದಲ್ಲದೆ, ‘ಡಿ’ ಗ್ರೇಡ್ ವರ್ಗಾವಣೆ ಸಮೇತ ಮುಖ್ಯಮಂತ್ರಿ ಕುಟುಂಬದಿಂದಲೇ ಆಗಬೇಕು. ಅಷ್ಟು ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ತೊಡಗಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ನಾನು ಯಾರ ಏಜೆಂಟೂ ಅಲ್ಲ. ಬಿಜೆಪಿ ಕಾರ್ಯಕರ್ತ. ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗ. ಯಾರ ಪರವಾಗಿ ನಿಲ್ಲಲು ನನಗೆ ಹುಚ್ಚು ಹಿಡಿದಿಲ್ಲ’ ಎಂದೂ ಯತ್ನಾಳ್ ಹೇಳಿದರು. ಮುಖ್ಯಮಂತ್ರಿ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಹಿಡಿತದಲ್ಲಿದೆ ಎಸ್‌ಐಟಿ. ಹೀಗಾಗಿ, ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡಿರುವುದರಿಂದ ಅದರಲ್ಲೂ ನ್ಯಾಯ ದೊರಕಲ್ಲ ಎಂದು ಹೇಳಿದ್ದಾರೆ.

- Advertisement -

‘ಸಿ.ಡಿ ಹಿಂದೆ ಕೇವಲ‌ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಬಿಜೆಪಿ ನಾಯಕರ ಕೈವಾಡ ಇದ್ದರೂ ಇರಬಹುದು’ ಎಂದು ಯತ್ನಾಳ್ ಆರೋಪಿಸಿದ್ದು ಒಟ್ಟಾರೆ ಬಿಜೆಪಿಯವರ ಮೇಲೆ ನಿರಂತರವಾಗಿ ಹರಿಹಾಯುವ ಯತ್ನಾಳ್ ಯಾರನ್ನೂ ಬಿಡುವ ನಿರ್ಧಾರ ಕಾಣುತ್ತಿಲ್ಲ.

Join Whatsapp