‘ಯಡಿಯೂರಪ್ಪ ನಾನು ತಂದ ಬಡವರ ಯೋಜನೆಗಳನ್ನು ಕಸಿದಿದ್ದಾರೆ’ : ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Prasthutha|

►“ಬಡವರನ್ನು ಮೇಲೆಕ್ಕೆತ್ತುವುದನ್ನು ಬಿಜೆಪಿ ಸಹಿಸಲ್ಲ”

- Advertisement -

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿನ ಬಡವರ ಕಲ್ಯಾಣಕ್ಕಾಗಿ ನಾನು ತಂದ ಯೋಜನೆಗಳನ್ನು ಮುಚ್ಚುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಅವರು ದಾವಣಗೆರೆಯ ತ್ರಿಶೂಲ್‌ ಕಲಾ ಭವನದಲ್ಲಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ದಿ.ಕೆ.ಮಲ್ಲಪ್ಪನವರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ‘ಸಮ ಸಮಾಜದ ಉದ್ದೇಶಕ್ಕಾಗಿ ನಾನಾ ಯೋಜನೆಗಳನ್ನೂ ತಂದರೂ, ಬಡವರ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ. ಬಡವರ ಹಸಿವು ನೀಗಿಸಲು ಅನ್ನಭಾಗ್ಯ, ಕೆಳವರ್ಗದ ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂ.ನೀಡುವ ವಿದ್ಯಾಸಿರಿ, ಪ್ರತಿಯೊಬ್ಬ ಬಡವ ಊಟ ಮಾಡಲು ಇಂದಿರಾ ಕ್ಯಾಂಟಿನ್‌ ತೆರೆದಿದ್ದೆ. ಆದರೆ, ಬಿ.ಎಸ್‌.ಯಡಿಯೂರಪ್ಪರಿಗೆ ಬಡವರು ಉದ್ಧಾರ ಆಗೋದು ಇಷ್ಟವಿಲ್ಲದ ಕಾರಣ ಅನ್ನಭಾಗ್ಯ ಕಡಿತ, ವಿದ್ಯಾಸಿರಿ ಯೋಜನೆ ಸ್ಥಗಿತ, ಇಂದಿರಾ ಕ್ಯಾಂಟಿನ್‌ ಮುಚ್ಚಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

ಕುರುಬ ಸಮಾಜದ ವಸತಿ ನಿಲಯದಲ್ಲಿ ಎಲ್ಲ ಸಮಾಜದವರು ಓದಿದ್ದು, ಹಲವರು ಈಗಲೂ ನೆನಸಿಕೊಳ್ಳುತ್ತಾರೆ. ಎಚ್‌.ಸಿ. ಮಹದೇವಪ್ಪ ಈ ವಸತಿ ನಿಲಯದಲ್ಲಿ ಓದಿದ್ದು, ಅವರು ಆಗಾಗ ಮೆಲುಕು ಹಾಕುತ್ತಾರೆ. ವಸತಿ ನಿಲಯ ನಡೆಸುವುದು ಕಷ್ಟವಾಗಿದ್ದರೂ, ಕುರುಬರ ವಸತಿ ನಿಲಯದಲ್ಲಿ ಉಚಿತ ದಾಸೋಹ ನೀಡಲಾಗುತ್ತಿದೆ ಎಂದಿದ್ದಾರೆ.

Join Whatsapp