Home ಟಾಪ್ ಸುದ್ದಿಗಳು ‘ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ’ ; ಭಾರತ ಸರ್ಕಾರದ ಸ್ಪಷ್ಟ ಸಂದೇಶ!

‘ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ’ ; ಭಾರತ ಸರ್ಕಾರದ ಸ್ಪಷ್ಟ ಸಂದೇಶ!

ಹೊಸದಿಲ್ಲಿ: 2023ರ ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ಬರಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ಸಿಕ್ಕಿದೆ. ಆದರೆ ಭಾರತಕ್ಕೆ ಪಾಕ್ ತಂಡವನ್ನು ಕಳುಹಿಸಲು ಷರತ್ತುಗಳನ್ನು ವಿಧಿಸಿದ್ದ ಪಾಕ್ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನು ಭಾರತ ಸರ್ಕಾರ ರವಾನಿಸಿದ್ದು, ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ ಎಂದು ಹೇಳಿದೆ.

 ವಾಸ್ತವವಾಗಿ ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಪಾಕ್ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸಬೇಕೆಂದರೆ ನಮ್ಮ ತಂಡಕ್ಕೆ ಭಾರತದಲ್ಲಿ ಹೆಚ್ಚಿನ ಭದ್ರತೆ ನೀಡಬೇಕು. ಇದನ್ನು ಐಸಿಸಿ ಲಿಖಿತ ರೂಪದಲ್ಲಿ ನಮಗೆ ಭರವಸೆ ನೀಡಿದರೆ, ನಾವು ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುತ್ತೇವೆ ಎಂಬ ಷರತ್ತನ್ನು ವಿಧಿಸಿದ್ದವು. ಆದರೆ ಇದೀಗ ಈ ಷರತ್ತಿಗೆ ಸಂದೇಶ ರವಾನೆಯಾಗಿದ್ದು, ಟೂರ್ನಿಯಲ್ಲಿ ಉಳಿದ ತಂಡಗಳಂತೆಯೇ ಪಾಕಿಸ್ತಾನ ತಂಡವನ್ನು ಭಾರತದಲ್ಲಿ ನಡೆಸಿಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಅಕ್ಟೋಬರ್ 5 ರಿಂದ ಭಾರತದಲ್ಲಿ 13ನೇ ಏಕದಿನ ವಿಶ್ವಕಪ್ ಆರಂಭವಾಗುತ್ತಿದ್ದು, ಇದರಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಸೇರಿದಂತೆ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಪಾಕಿಸ್ತಾನದ ಮೊದಲ ಪಂದ್ಯ ಅಕ್ಟೋಬರ್ 6 ರಂದು ನಡೆಯಲಿದೆ. ಆದರೆ ಕೆಲವು ದಿನಗಳ ಹಿಂದೆ, ಪಾಕಿಸ್ತಾನಿ ಮಂಡಳಿಯು ತಂಡವನ್ನು ಕಳುಹಿಸಲು ಹಿಂದೇಟು ಹಾಕುತ್ತಿತ್ತು. ಅಲ್ಲದೆ ತಂಡವನ್ನು ಭಾರತಕ್ಕೆ ಕಳುಹಿಸಲು ಅನುಮತಿಗಾಗಿ ತನ್ನ ಸರ್ಕಾರವನ್ನು ಕೇಳಿತ್ತು. ಪಾಕಿಸ್ತಾನ ಸರ್ಕಾರವು ರಚಿಸಿದ್ದ ಸಮಿತಿಯಲ್ಲಿ, ಅಂತಿಮವಾಗಿ ತಂಡವನ್ನು ಭಾರತಕ್ಕೆ ಕಳುಹಿಸುವುದಕ್ಕೆ ಅನುಮತಿ ನೀಡಲಾಗಿತ್ತು.

ಶುಕ್ರವಾರ, ಆಗಸ್ಟ್ 11 ರಂದು, ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ವಿಶ್ವಕಪ್‌ಗಾಗಿ ಭಾರತಕ್ಕೆ ಬರುವ ಇತರ ಎಲ್ಲಾ ತಂಡಗಳಂತೆ ಪಾಕಿಸ್ತಾನ ತಂಡಕ್ಕೂ ಆತಿಥ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಪಾಕ್ ತಂಡ ಇತರೆ ತಂಡಗಳಂತೆ ಭಾರತದಲ್ಲಿ ವಿಶ್ವಕಪ್ ಆಡಲಿದೆ.

Join Whatsapp
Exit mobile version