Home ಟಾಪ್ ಸುದ್ದಿಗಳು ಬಸ್ಸಿನಲ್ಲಿ ಯುವತಿ ಅಸ್ವಸ್ಥ: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿಯ ಚಾಲಕ, ನಿರ್ವಾಹಕ

ಬಸ್ಸಿನಲ್ಲಿ ಯುವತಿ ಅಸ್ವಸ್ಥ: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿಯ ಚಾಲಕ, ನಿರ್ವಾಹಕ

►ಬಸ್ ಸಿಬ್ಬಂದಿ ಶಶಿಕಾಂತ್, ಸಲೀಂ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ


ಉಡುಪಿ: ಅಸ್ವಸ್ಥಗೊಂಡ ಯುವತಿಗಾಗಿ ಚಾಲಕ ಹಾಗೂ ನಿರ್ವಾಹಕ ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಘಟನೆ ಉಡುಪಿ ನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.


ಶಿರ್ವದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಸ್ ಉಡುಪಿಯ ಹಳೆ ತಾಲ್ಲೂಕು ಕಚೇರಿ ಬರುವಾಗ ಯುವತಿ ಅಸ್ವಸ್ಥಳಾಗಿದ್ದು, ಬಸ್ ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ.


ತಕ್ಷಣವೇ ಬಸ್ ಅನ್ನು ಹತ್ತಿರದ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ್ಕೆ ಚಾಲಕ ಹಾಗೂ ನಿರ್ವಾಹಕ ಕೊಂಡೊಯ್ದಿದ್ದಾರೆ. ಯುವತಿಗೆ ತಕ್ಷಣವೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಬಸ್ ಸಿಬ್ಬಂದಿ ಶಶಿಕಾಂತ್ ಮತ್ತು ಸಲೀಂ ಅವರ ಮಾನವೀಯ ಕಳಕಳಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


ಇತ್ತೀಚೆಗೆ ಮಂಗಳೂರಿನ ಖಾಸಗಿ ಬಸ್ಸೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಎದೆನೋವಿನಿಂದ ಅಸ್ವಸ್ಥಗೊಂಡಾಗ ಬಸ್ ಸಿಬ್ಬಂದಿ ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದೊಯ್ದು ಸಕಾಲಿಕವಾಗಿ ಚಿಕಿತ್ಸೆಗೆ ನೆರವಾಗಿದ್ದರು.

Join Whatsapp
Exit mobile version