ಭವಿಷ್ಯದಲ್ಲಿಯೂ ತ್ರಿಭಾಷಾ ನೀತಿಯನ್ನು ಸ್ವೀಕರಿಸುವುದಿಲ್ಲ: ಸಂಜಯ್ ರಾವುತ್

- Advertisement -

ಮುಂಬೈ: ತ್ರಿಭಾಷಾ ನೀತಿಯ ಅನುಷ್ಠಾನದ ಕುರಿತಾದ ಆದೇಶಗಳನ್ನು ಮಹಾರಾಷ್ಟ್ರ ಸರ್ಕಾರ ಹಿಂತೆಗೆದುಕೊಳ್ಳಲು ನಿರ್ಧರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, ನಾವು ಭವಿಷ್ಯದಲ್ಲಿ ಎಂದಿಗೂ ಅಂತಹ ನೀತಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಮಹಾರಾಷ್ಟ್ರ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಹಿಂದಿ ಭಾಷೆಯನ್ನು ಪರಿಚಯಿಸುವುದಕ್ಕೆ ಸಂಬಂಧಿಸಿದಂತೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಸಚಿವ ಸಂಪುಟ ಸಭೆ, ತ್ರಿಭಾಷಾ ನೀತಿಯ ಅನುಷ್ಠಾನದ ಕುರಿತಾದ ಸರ್ಕಾರಿ ಆದೇಶಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು.

ಭಾಷಾ ನೀತಿಯ ಕುರಿತು ಮುಂದಿನ ಮಾರ್ಗ ಸೂಚಿಸಲು ಶಿಕ್ಷಣ ತಜ್ಞ ನರೇಂದ್ರ ಜಾಧವ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಂತರ ಘೋಷಿಸಿದ್ದರು.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ‘ಫಡಣವೀಸ್ ಸಮಿತಿಗಳು ಮತ್ತು ಎಸ್‌ಐಟಿಗಳನ್ನು ರಚಿಸಲು ಇಷ್ಟಪಡುತ್ತಾರೆ. ಆದರೆ, ಏನನ್ನೂ ಜಾರಿ ಮಾಡುವುದಿಲ್ಲ’ಎಂದರು.

ಜಾಧವ್ ಅವರನ್ನು ಅರ್ಥಶಾಸ್ತ್ರಜ್ಞರಾಗಿ ಗೌರವಿಸಲಾಗುತ್ತದೆ. ಆದರೆ, ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಗೆ ಈಗ ಯಾವುದೇ ಪ್ರಸ್ತುತತೆ ಇಲ್ಲ. ಭವಿಷ್ಯದಲ್ಲಿ ತ್ರಿಭಾಷಾ ನೀತಿಯನ್ನು ನಾವು ಸ್ವೀಕರಿಸುವುದಿಲ್ಲ ಎಂದು ರಾವುತ್ ಪ್ರತಿಪಾದಿಸಿದ್ದಾರೆ.

ಶಿವಸೇನಾ (ಯುಬಿಟಿ) ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜಂಟಿಯಾಗಿ ಜುಲೈ 5 ರಂದು ಮುಂಬೈನಲ್ಲಿ ಆಯೋಜಿಸಲಿರುವ ‘ಮರಾಠಿ ವಿಜಯ್ ದಿವಸ್’ ಆಚರಣೆಯ ಕುರಿತು ಮಾತನಾಡಿದ ಅವರು, ಎರಡೂ ಕಡೆಯ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿದರು.

- Advertisement -


Must Read

Related Articles