ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆಗೈದು ಅಪಘಾತದ ನಾಟಕವಾಡಿದ ಪತ್ನಿ !

Prasthutha|

ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಪತ್ನಿಯೇ ಕೊಲೆ ಮಾಡಿದ ಘಟನೆ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ.

- Advertisement -

ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಪಾಂಡಪ್ಪ ಜಟಕನ್ನವರ (35) ಕೊಲೆಯಾದವರು. ಈತನ ಪತ್ನಿ ಲಕ್ಷ್ಮಿ ಜಟಕನ್ನವರ ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕೆ ಆಗಾಗ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ರಾತ್ರಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಇದೇ ವಿಷಯಕ್ಕೆ ಜಗಳವಾಡಿದ್ದು, ಈ ವಿಷಯ ರಮೇಶ್ (36) ಗೆ ಲಕ್ಷ್ಮಿ ತಿಳಿಸಿ, ಬಳಿಕ ಗಂಡನನ್ನು ಕೊಲೆ ಮಾಡಲು ತಂತ್ರ ರೂಪಿಸಿದ್ದಾಳೆ ಎನ್ನಲಾಗಿದೆ.

- Advertisement -

ಸಂಚಿನ ಪ್ರಕಾರ, ರಮೇಶ್ ಬಡಿಗೇರ ಲಕ್ಷ್ಮಿ ಮನೆಗೆ ಬಂದಿದ್ದಾನೆ. ಈ ವೇಳೆ ರಮೇಶ್ ಹಾಗೂ ಪಾಂಡಪ್ಪ ಮಧ್ಯೆ ನಡೆದಿದ್ದ ಜಗಳ ವಿಕೋಪಕ್ಕೆ ತಿರುಗಿದೆ. ಆಗ ಪಾಂಡಪ್ಪನ ತಲೆಗೆ ಲಕ್ಷ್ಮಿ ಕೃಷಿ ಉಪಕರಣದಿಂದ ಹೊಡೆದಿದ್ದು, ತಲೆಗೆ ಗಂಭೀರ ಪೆಟ್ಟು ಬಿದ್ದ ಪಾಂಡಪ್ಪ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪಾಂಡಪ್ಪ ಜಕ್ಕನವರ ಶವವನ್ನು ಬೈಕ್ ಮೇಲೆ ಹೊತ್ತೊಯ್ದು, ರಾಮದುರ್ಗ ತಾಲೂಕಿನ ಹೊಸೂರು ಹೊರವಲಯದ ಕಿರುಸೇತುವೆ ಬಳಿ ಎಸೆದಿದ್ದರು. ಪಾಂಡಪ್ಪ ಅಪಘಾತದಿಂದ ಮೃತ ಪಟ್ಟಿದ್ದಾನೆ ಎಂದು ಬಿಂಬಿಸಬೇಕು ಎಂಬ ಕಾರಣಕ್ಕೆ ಲಕ್ಷ್ಮಿ ತನಗೆ ಏನೂ ಗೊತ್ತೇ ಇಲ್ಲದ ರೀತಿಯಲ್ಲಿ ಮನೆಗೆ ಹೋಗಿ ಮರುದಿನ ತನ್ನ ಪತಿ ಮನೆಗೆ ಮರಳಿ ಬಂದಿಲ್ಲ ಎಂದು ನಾಟಕವಾಡಿದ್ದಾಳೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಟಕೋಳ ಪೊಲೀಸರು 24 ಗಂಟೆಯೊಳಗಾಗಿಯೇ ಪ್ರಕರಣವನ್ನು ಭೇದಿಸಿದ್ದಾರೆ. ಲಕ್ಷ್ಮಿ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಘಟನೆ ಕುರಿತು ಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ರಮೇಶ್ ಬಡಿಗೇರನನ್ನು ಬಂಧಿಸಲಾಗಿದೆ.

Join Whatsapp