Home ಟಾಪ್ ಸುದ್ದಿಗಳು ನೋಟ್ ಬ್ಯಾನ್’ನಿಂದಾದ ಪ್ರಯೋಜನಗಳೇನು, ಮೋದಿಯವರೇ ಈಗಲಾದರೂ ಉತ್ತರಿಸಿ- ಕಾಂಗ್ರೆಸ್

ನೋಟ್ ಬ್ಯಾನ್’ನಿಂದಾದ ಪ್ರಯೋಜನಗಳೇನು, ಮೋದಿಯವರೇ ಈಗಲಾದರೂ ಉತ್ತರಿಸಿ- ಕಾಂಗ್ರೆಸ್

ಬೆಂಗಳೂರು: ನೋಟ್ ಬ್ಯಾನ್’ನಿಂದಾದ ಪ್ರಯೋಜನಗಳೇನು ಎಂದು ಇದುವರೆಗೂ ಬಿಜೆಪಿ ಸರ್ಕಾರ ಹೇಳಲು ತಯಾರಿಲ್ಲ. ಮಾದಕವಸ್ತು ವ್ಯವಹಾರಕ್ಕೆ, ಭಯೋತ್ಪಾದನೆಗೆ, ಹವಾಲಾ ದಂಧೆಗೆ 2000 ರೂ. ನೋಟುಗಳು ಬಳಕೆಯಾಗುತ್ತಿವೆ, 2000 ರೂ. ನೋಟು ತಂದಿದ್ದೇಕೆ ಎಂದು ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ಸಂಸದರೇ ಕೇಳಿದ್ದಾರೆ, ತಮ್ಮದೇ ಸಂಸದರಿಗಾದರೂ ಉತ್ತರಿಸುವರೇ ನರೇಂದ್ರ ಮೋದಿಯವರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ, ಹಲ್ಲೆ, ಸುಲಿಗೆ, ದರೋಡೆಗಳಂತಹ ಕ್ರೈಮ್’ಗಳನ್ನು ಪೊಲೀಸರೇ ಮಾಡುವಂತಹ ಸ್ಥಿತಿ ನಿರ್ಮಿಸಿದ್ದು ಬಿಜೆಪಿ  ಸರ್ಕಾರದ ಸಾಧನೆಗಳಲ್ಲೊಂದು! ಗೃಹ ಇಲಾಖೆಯನ್ನು ಸುಲಿಗೆ ಇಲಾಖೆಯನ್ನಾಗಿ ಮಾಡಿದ ಕೀರ್ತಿ ಆರಗ ಜ್ಞಾನೇಂದ್ರ ಎಂಬ ಅಸಮರ್ಥ ಸಚಿವರಿಗೆ ಸಲ್ಲುತ್ತದೆ ಎಂದು ಕುಟುಕಿದೆ.

ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಪತ್ತೆಯಾಗಿದೆ, ಸರ್ಕಾರ ಮಾತ್ರ ‘ಆತಂಕಪಡಬೇಕಿಲ್ಲ’ ನಿರ್ಲಕ್ಷ್ಯದ ಹೇಳಿಕೆ ನೀಡಿ ಸುಮ್ಮನಿದೆ. ಸೊಳ್ಳೆಗಳಿಂದ ಹರಡುವ ಈ ಸೋಂಕಿಗೆ ಅಕಾಲಿಕ ಮಳೆ ಮತ್ತಷ್ಟು ಬಲ ಕೊಡಬಹುದಾದ ಸಾಧ್ಯತೆ ಇದೆ. ಸಚಿವ ಸುಧಾಕರ್ ಅವರೇ, ಈ ಸೋಂಕನ್ನು ಉಡಾಫೆಯಿಂದ ನೋಡದೆ, ಕೂಡಲೇ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಕೋವಿಡ್’ನಿಂದ ಯಾವುದೇ ಪಾಠ ಕಲಿಯದ ಸರ್ಕಾರ ಆರೋಗ್ಯ ಇಲಾಖೆಯನ್ನು ಇನ್ನಷ್ಟು ಹದಗೆಡಿಸಿದೆ, ಆಂಬುಲೆನ್ಸ್, ಚಿಕಿತ್ಸೆ ಕೊರತೆಗಳಿಂದ ಸಾವುಗಳಾಗುತ್ತಿವೆ. ಇದೇ ಹೊತ್ತಿನಲ್ಲಿ ಅಕಾಲಿಕ ಮಳೆಯಿಂದಾಗಿ ಝೀಕಾ, ಡೆಂಗ್ಯೂ, ಚಿಕನ್ ಗುನ್ಯಾದಂತಹ ರೋಗಗಳು ಹೆಚ್ಚುತ್ತಿರುವಾಗ ವೈದ್ಯಕೀಯ ಸೇವೆಯನ್ನು ಸನ್ನದ್ದಗೊಳಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Join Whatsapp
Exit mobile version