Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಟೆಕ್ ಶೃಂಗಸಭೆ ಉದ್ಘಾಟಿಸಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಂಗಳೂರಿನಲ್ಲಿ ಟೆಕ್ ಶೃಂಗಸಭೆ ಉದ್ಘಾಟಿಸಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಂಗಳೂರು; ತಂತ್ರಜ್ಞಾನದ ನೈಜ ಸಾಮರ್ಥ್ಯ, ಕೃಷಿ, ಶಿಕ್ಷಣ, ಆರೋಗ್ಯ ಆರೈಕೆ, ಆಡಳಿತ ಮತ್ತು ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆ ತರಲು ಮುಂದಾಗಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.


ಬೆಂಗಳೂರು ಟೆಕ್ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಉತ್ಪಾದಕತೆ ಮತ್ತು ಆದಾಯವನ್ನು ಸುಧಾರಿಸಲು ಸಹಾಯ ಮಾಡಲು ನಿಖರವಾದ ಕೃಷಿ, ಆನ್ ಲೈನ್ ಮಾರುಕಟ್ಟೆಗಳು ಮತ್ತು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯಂತಹ ಸ್ಮಾರ್ಟ್ ಕೃಷಿ-ತಂತ್ರಜ್ಞಾನದ ಪರಿಹಾರಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕೃಷಿಯ ಮೇಲೆ ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, ಈ ಸವಾಲಿಗೆ ತಾಂತ್ರಿಕ ಪರಿಹಾರಗಳನ್ನು ಒದಗಿಸಲು ಕರೆ ನೀಡಿದರು.

ತಂತ್ರಜ್ಞಾನದ ಬಳಕೆಯ ಮೂಲಕ ಆಡಳಿತ ವ್ಯವಸ್ಥೆಗಳನ್ನು ಪರಿವರ್ತಿಸುವತ್ತ ಗಮನಹರಿಸಿರುವ ಸರ್ಕಾರವನ್ನು ಶ್ಲಾಘಿಸಿದ ಅವರು, ಪ್ರಕ್ರಿಯೆಗಳ ಡಿಜಿಟಲೀಕರಣವು ಜನರಿಗೆ ಸೇವೆಗಳನ್ನು ಉತ್ತಮವಾಗಿ ತಲುಪಿಸಲು ಸಹಾಯ ಮಾಡಿದೆ ಎಂದು ಹೇಳಿದರು.
‘ಹಂಚಿಕೆ ಮತ್ತು ಕಾಳಜಿ’ಯ ಪ್ರಾಚೀನ ಭಾರತೀಯ ತತ್ವವನ್ನು ಪುನರುಚ್ಚರಿಸಿದ ಶ್ರೀ ನಾಯ್ಡು, ಶೃಂಗಸಭೆಯಲ್ಲಿ ಭಾಗವಹಿಸುವವರು ಮಾನವೀಯತೆ ಮತ್ತು ಜಗತ್ತಿನ ದೊಡ್ಡ ಒಳಿತಿಗಾಗಿ ತಮ್ಮ ಆಲೋಚನೆಗಳು, ಅನುಭವಗಳು ಮತ್ತು ನಾವೀನ್ಯತೆಗಳನ್ನು ಹಂಚಿಕೊಂಡು ಚರ್ಚಿಸಬೇಕೆಂದು ಆಶಿಸಿದರು.


ಪ್ರಧಾನಮಂತ್ರಿಯವರ – ಸುಧಾರಣೆ, ಕಾರ್ಯಾನುಷ್ಠಾನ ಮತ್ತು ಪರಿವರ್ತನೆ ಎಂಬ ಮೂರು ಪದಗಳ ಮಂತ್ರವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಮುಂದಿನ ದಿನಗಳಲ್ಲಿ ನಾವು ಜ್ಞಾನದ ಆರ್ಥಿಕತೆ, ಡಿಜಿಟಲೀಕರಣ ಮತ್ತು ನಾವೀನ್ಯತೆಯನ್ನು ಸೃಷ್ಟಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದರು. “ಪುನೀತ್ ಪ್ರತಿಭಾವಂತ ನಟರಷ್ಟೇ ಆಗಿರಲಿಲ್ಲ, ಜೊತೆಗೆ, ನಿರ್ಗತಿಕರ ಕಲ್ಯಾಣ ಮತ್ತು ಅವರ ಯೋಗ ಕ್ಷೇಮಕ್ಕಾಗಿ ಕಾಳಜಿ ವಹಿಸುತ್ತಿದ್ದ ಮಹಾನ್ ವ್ಯಕ್ತಿ”ಯಾಗಿದ್ದರು ಎಂದು ಅವರು ಹೇಳಿದರು.


ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಟಿಎಸ್-2021ಲ್ಲಿ ಪಾಲ್ಗೊಂಡಿದ್ದಕ್ಕಾಗಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಇಸ್ರೇಲ್ ಪ್ರಧಾನಮಂತ್ರಿ ನಫ್ತಾಲಿ ಬೆನೆಟ್ ಅವರಿಗೆ ಉಪರಾಷ್ಟ್ರಪತಿಯವರು ಧನ್ಯವಾದಗಳನ್ನು ಅರ್ಪಿಸಿದರು.
ಕರ್ನಾಟಕದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮುರುಗೇಶ್ ಆರ್. ನಿರಾಣಿ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹಿರಿಯ ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಉದ್ಯಮಿಗಳು ಮತ್ತು ವಿಶ್ವಾದ್ಯಂತದ ನಾವೀನ್ಯದಾರರು ಈ ಕಾರ್ಯಕ್ರಮದಲ್ಲಿ ಭೌತಿಕವಾಗಿ ಮತ್ತು ವರ್ಚುವಲ್ ಆಗಿ ಪಾಲ್ಗೊಂಡಿದ್ದರು.

Join Whatsapp
Exit mobile version