ಬಿಜೆಪಿಯವರು ಮನುಷ್ಯತ್ವ ಮೀರಿದವರು: ಬಿ.ಕೆ ಹರಿಪ್ರಸಾದ್ ಕಿಡಿ

Prasthutha|

ಭಟ್ಕಳ: ‘ಬಿಜೆಪಿಯವರು ಮನುಷ್ಯತ್ವ ಮೀರಿದವರು. ಅವರ ಚುನಾವಣಾ ಪ್ರಣಾಳಿಕೆಯೇ ಅದನ್ನು ಎತ್ತಿ ತೋರಿಸುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.

- Advertisement -

ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್ ಪಕ್ಷವು ರಸ್ತೆ, ನೀರು, ಸೇತುವೆ ಬಗ್ಗೆ ಮಾತನಾಡಿದರೆ, ಬಿ.ಜೆ.ಪಿ.ಯವರು ಹಿಂದೂ ಮುಸ್ಲಿಂ, ಚೀನಾ, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಇಂತಹ ಜನವಿರೋಧಿ, ಜನರ ಶಾಂತಿ ನೆಮ್ಮದಿ ಕೆಡಿಸುವ ಪಕ್ಷ ನಮಗೆ ಬೇಕೇ’ ಎಂದು ಪ್ರಶ್ನಿಸಿದರು.

‘ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇರದ ಬಿ.ಜೆ.ಪಿ.ಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಅವರಿಗೆ ಪಂಚಾಯಿತಿ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಸ್ಥಳೀಯ ಆಡಳಿತಗಳಿಗೆ ಅಧಿಕಾರ ನೀಡದೇ ಎಲ್ಲವನ್ನೂ ತಾವೇ ಕಬಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.

- Advertisement -

ಮುಖಂಡ ಮಂಕಾಳ ವೈದ್ಯ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಸರ್ಕಾರವು ಚುನಾವಣೆ ಮುಂದೂಡಿದೆ. ಈ ನೀತಿ ವಿರುದ್ಧ ಚುನಾವಣಾ ಆಯೋಗವು ನ್ಯಾಯಾಲಯದ ಮೊರೆ ಹೋಗಿದೆ. ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಲು ಮನಸ್ಸಿಲ್ಲದೇ ಅಧಿಕಾರಕ್ಕಾಗಿ ಬಿ.ಜೆ.ಪಿ.ಯರು ಸುಳ್ಳು ಹೇಳುತ್ತಾ ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಕಾಂಗ್ರೆಸ್ ಮುಖಂಡ ಮುಜಾಮಿಲ್, ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಮುಖಂಡರಾದ ಜಯಶ್ರೀ ಮೊಗೇರ, ನಯನಾ ನಾಯ್ಕ, ಟಿ.ಡಿ.ನಾಯ್ಕ ಇದ್ದರು.

Join Whatsapp