Home ಟಾಪ್ ಸುದ್ದಿಗಳು ಎಸ್ ಸಿ, ಎಸ್ ಟಿ ಹಣ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ: ಸರ್ಕಾರದಿಂದ ದಲಿತ ಸಮುದಾಯಕ್ಕೆ ದ್ರೋಹ...

ಎಸ್ ಸಿ, ಎಸ್ ಟಿ ಹಣ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ: ಸರ್ಕಾರದಿಂದ ದಲಿತ ಸಮುದಾಯಕ್ಕೆ ದ್ರೋಹ – ಸಿದ್ದರಾಮಯ್ಯ

ಬೆಂಗಳೂರು: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಮೀಸಲಿಟ್ಟ ಹಣವನ್ನು ಕಾನೂನಿಗೆ ವಿರುದ್ದವಾಗಿ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮ ಸರ್ಕಾರ ಜಾರಿಗೆ ತಂದಿರುವ  ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯ ಪ್ರಕಾರ ಒಟ್ಟು ಬಜೆಟ್ ನ ಶೇಕಡಾ 24.1ರಷ್ಟು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕಾರ್ಯಕ್ರಮಗಳಿಗಷ್ಟೇ ಬಳಸಬೇಕಾಗುತ್ತದೆ. ಆ ವರ್ಷ ಉಳಿಕೆಯಾದರೆ ಅದನ್ನು ನಂತರದ ವರ್ಷ ಖರ್ಚು ಮಾಡಬೇಕು. ನಿಗದಿತ ಪ್ರಮಾಣದಲ್ಲಿ ನಿಗದಿತ ಉದ್ದೇಶಕ್ಕೆ ಖರ್ಚು ಮಾಡದೆ ಇದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ದ ಕಾನೂನುಕ್ರಮ ಕೈಗೊಳ್ಳಲು ಕೂಡಾ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. 2021-22ರ ರಾಜ್ಯ ಬಜೆಟ್ ನಲ್ಲಿ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯನ್ವಯ ಯೋಜನಾ ವೆಚ್ಚದ  ಶೇಕಡಾ 24.1ರಷ್ಟು ಅಂದರೆ 26,695.64 ಕೋಟಿ ರೂಪಾಯಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಕಾಯ್ದೆಯನ್ನು ಉಲ್ಲಂಘಿಸಿ  ಒಟ್ಟು ಹಣದಲ್ಲಿ ರೂ.7885.32 ಕೋಟಿಗಳನ್ನು  ಮೂಲಸೌಕರ್ಯದ ಯೋಜನೆಗಳಿಗೆ ವ್ಯಯ ಮಾಡಿದೆ. ಇದು ಸಂಪೂರ್ಣವಾಗಿ ಕಾನೂನು ವಿರೋಧಿ ನಡೆಯಾಗಿದ್ದು ಇದಕ್ಕೆ ಕಾರಣಕರ್ತರಾದವರ ವಿರುದ್ದ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

2018-21ರ ನಾಲ್ಕು ವರ್ಷಗಳ ಅವಧಿಯಲ್ಲಿ ಈ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಹಣದಲ್ಲಿ ರೂ.7885.32 ಕೋಟಿ ರೂಪಾಯಿಗಳನ್ನು ನೀರಾವರಿ, ನಗರಾಭಿವೃದ್ದಿ ಮತ್ತು ಗ್ರಾ ಮೀಣಾಭಿವೃದ್ದಿ ಇಲಾಖೆಗಳ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ನೇರ ಫಲಾನುಭವಿಗಳಾಗಿರುವ ಯೋಜನೆಗಳಿಗೆ ಹಣವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದರು.

ಎಸ್ ಸಿಪಿ/ಟಿಎಸ್ ಪಿ ಹಣದ ಸ್ವಲ್ಪ ಭಾಗವನ್ನು ಸಾಮಾನ್ಯ ಮೂಲಸೌಕರ್ಯಗಳಿಗೆ ಬಳಸಲು ಕಾಯ್ದೆಯಲ್ಲಿ ಅವಕಾಶವಿದ್ದರೂ, ಇಷ್ಟೊಂದು ಪ್ರಮಾಣದ ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ನೇರ ಫಲಾನುಭವಿಗಳಲ್ಲದ ಯೋಜನೆಗಳಿಗೆ ಬಳಸುವುದು ಆ ಸಮುದಾಯಕ್ಕೆ ಬಗೆಯುವ ದ್ರೋಹ ಮಾತ್ರವಲ್ಲ, ಕಾನೂನಿನ ಉಲ್ಲಂಘನೆಯೂ ಹೌದು. ರಾಜ್ಯದ ಸಂಪನ್ಮೂಲಗಳನ್ನು ಹಂಚಿಕೆ ಮಾಡುವಾಗ ಅನುಸರಿಸಬೇಕಾದ ಸೂತ್ರಗಳು ಯಾವುವು ಎಂಬುದನ್ನು ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯ ಸೆಕ್ಷನ್ 3ರಲ್ಲಿ ಸ್ಪಷ್ಟವಾಗಿ ಹೇಳಿದೆ. ಅದರ ಪ್ರಕಾರ“ವಿನಾಯಿತಿಸಲಾದ ವೆಚ್ಚ” ಎಂದರೆ ಈ ಅಧಿನಿಯಮದ ಅನ್ವಯದಿಂದ ವಿನಾಯಿತಿಗೊಳಿಸಲಾದ ವೆಚ್ಚ ಮತ್ತು ಇದು ವೇತನ, ವೇತನ ಸಹಾಯಾನುದಾನ, ಪಿಂಚಣಿ, ಆಡಳಿತಾತ್ಮಕ ವೆಚ್ಚ, ಮೂಲಧನ ಮರು ಸಂದಾಯ ಮತ್ತು ರಾಜ್ಯ ಸರ್ಕಾರ ತನ್ನದೇ ಸಾಲಗಳ ಲೆಕ್ಕದ ಮೇಲೆ ಬಡ್ಡಿ ಸಂದಾಯ ಮತ್ತು ರಾಜ್ಯ ಸರ್ಕಾರದ ಉದ್ಯಮಗಳ ಮೂಲಕ ಆಯವ್ಯಯ-ಹೊರತಾದ ಸಾಲಗಳು ಹಾಗೂ ರಾಜ್ಯ ಸರ್ಕಾರವು ಅಧಿಸೂಚಿಸಿದ ಆಡಳಿತಾತ್ಮಕ ಸ್ವರೂಪದ ಇತರ ಯಾವುದೇ ವೆಚ್ಚವನ್ನು ಒಳಗೊಳ್ಳುತ್ತದೆ.” ಇವುಗಳನ್ನು ಹೊರತುಪಡಿಸಿ ಹಂಚಿಕೆ ಮಾಡಬಹುದಾದ ಮೊತ್ತದ ಆಧಾರದ ಮೇಲೆ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ.ಗೆ ಅನುದಾನವನ್ನು ನಿಗಧಿಪಡಿಸಲಾಗುತ್ತದೆ. ಇದರ ಆಧಾರದ ಮೇಲೆ ಜನಸಂಖ್ಯೆಗನುಗುಣವಾಗಿ ಅನುದಾನವನ್ನು ನಿಗದಿಪಡಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

 2012-13 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರಿಗಾಗಿ ಕೇವಲ ರೂ.7,200 ಕೋಟಿಗಳನ್ನು ಮೀಸಲಿರಿಸಲಾಗಿತ್ತು.  ಈ ಮೊತ್ತವು 2014-15 ರ ವೇಳೆಗೆ ರೂ.15834 ಕೋಟಿಗಳಿಗೆ ಏರಿಕೆಯಾಯಿತು. 2018 ರ ಫೆಬ್ರವರಿಯಲ್ಲಿ ನಾನು ಬಜೆಟ್ ಮಂಡಿಸಿದಾಗ ರೂ.29691.5 ಕೋಟಿಗಳನ್ನು ಈ ಯೋಜನೆಗೆ ಮೀಸಲಿರಿಸಿದ್ದೆ.  ಆದರೆ ಕಳೆದ 3 ವರ್ಷಗಳಿಂದ ರಾಜ್ಯದ ಬಿಜೆಪಿ ಸರ್ಕಾರವು ಈ ವರ್ಗಗಳಿಗೆ ಖರ್ಚು ಮಾಡುವ ಅನುದಾನವನ್ನು ಒಂದೇ ಸಮನೆ ಕಡಿಮೆ ಮಾಡುತ್ತಿದೆ. ಬಜೆಟ್ ಗಾತ್ರ ಮಾತ್ರ ದೊಡ್ಡದಾಗುತ್ತಿದೆಯೇ ಹೊರತು, ಜನರ ಕಲ್ಯಾಣಕ್ಕಾಗಿ ಖರ್ಚು ಮಾಡುವ ಅನುದಾನ ಕಡಿಮೆಯಾಗುತ್ತಿದೆ. 2008-09 ರಿಂದ 2012-13 ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್ಸಿಪಿ  ಮತ್ತು ಟಿಎಸ್ಪಿ ಗೆ ಮೀಸಲಿಟ್ಟಿದ್ದ ಹಣ ಒಟ್ಟು 22261 ಕೋಟಿ ರೂಪಾಯಿ. 2018ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ವರ್ಷಗಳಲ್ಲಿ ಈ ಯೋಜನೆಗೆ 88,395 ಕೋಟಿ ರೂಪಾಯಿ ಖರ್ಚು ಮಾಡಿದ್ದೆವು ಎಂದು ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version