Home ಟಾಪ್ ಸುದ್ದಿಗಳು ಬಿಜೆಪಿ ನಾಯಕನಿಂದ ಆದಿವಾಸಿಗಳ ಮೇಲೆ ಮೂತ್ರ ವಿಸರ್ಜನೆ ‘ಸಂವಿಧಾನ್ ಹತ್ಯಾ ದಿವಸ್’ ಅಲ್ಲವೇ?: ಖರ್ಗೆ

ಬಿಜೆಪಿ ನಾಯಕನಿಂದ ಆದಿವಾಸಿಗಳ ಮೇಲೆ ಮೂತ್ರ ವಿಸರ್ಜನೆ ‘ಸಂವಿಧಾನ್ ಹತ್ಯಾ ದಿವಸ್’ ಅಲ್ಲವೇ?: ಖರ್ಗೆ

ನವದೆಹಲಿ: ಜೂನ್‌ 25 ಅನ್ನು ಸಂವಿಧಾನ ಹತ್ಯಾ ದಿವಸ್‌ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದ್ದಕ್ಕೆ ಕೆಂಡವಾದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಲವು ಘಟನೆಗಳನ್ನು ಪ್ರಸ್ತಾಪಿಸಿದ್ದಾರೆ.

ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ ಮಾಡಿರುವ ಅವರು,’ಕಳೆದ 10 ವರ್ಷಗಳಲ್ಲಿ ನಿಮ್ಮ ಸರ್ಕಾರ ಪ್ರತಿದಿನ ‘ಸಂವಿಧಾನ ಹತ್ಯಾ ದಿವಸ್’ ಆಚರಿಸಿದೆ. ದೇಶದ ಪ್ರತಿಯೊಬ್ಬ ಬಡವರ ಮತ್ತು ವಂಚಿತ ವರ್ಗದ ಆತ್ಮಗೌರವವನ್ನು ಪ್ರತಿ ಕ್ಷಣವೂ ಕಿತ್ತುಕೊಂಡಿದ್ದೀರಿ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಆದಿವಾಸಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ, ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತರ ಮಗಳನ್ನು ಪೊಲೀಸರು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದ್ದು ಎಲ್ಲಾ ಸಂವಿಧಾನದ ಕೊಲೆಯಲ್ಲದೇ ಮತ್ತೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ದಲಿತರ ವಿರುದ್ಧ ಪ್ರತಿ 15 ನಿಮಿಷಕ್ಕೊಂದು ಅಪರಾಧ ಮತ್ತು ಪ್ರತಿದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಅವು ಸಂವಿಧಾನದ ಕೊಲೆಯಲ್ಲವೇ, ಕಳೆದ 13 ತಿಂಗಳಿಂದ ಮಣಿಪುರ ಹಿಂಸಾಚಾರದ ಕಪಿಮುಷ್ಠಿಯಲ್ಲಿ ಸಿಲುಕಿರುವಾಗ ನೀವು ಅಲ್ಲಿಗೆ ಹೋಗಲು ಬಯಸದೇ ಇರುವಾಗ ಅದು ಸಂವಿಧಾನದ ಹತ್ಯೆಯಲ್ಲವೇ ಎಂದು ‌ಖರ್ಗೆ ಕೇಳಿದ್ದಾರೆ.

ಮೋದಿ ಅವರೇ, ನಿಮಗೆ ಸಂವಿಧಾನದ ಬಗ್ಗೆ ಮಾತನಾಡುವುದು ಇಷ್ಟವಿಲ್ಲ. ಬಿಜೆಪಿ-ಆರ್‌.ಎಸ್‌.ಎಸ್‌ ಹಾಗೂ ಜನಸಂಘ ಯಾವತ್ತೂ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಆರ್.ಎಸ್.ಎಸ್‌. ಮುಖವಾಣಿ ಆರ್ಗನೈಸರ್‌ನ 1949ರ ಜೂನ್‌ 30ರ ಸಂಚಿಕೆಯಲ್ಲಿ, ಹೊಸ ಸಂವಿಧಾನದ ಕೆಟ್ಟ ವಿಷಯ ಏನೆಂದರೆ ಅದರಲ್ಲಿ ಒಂದಂಶವೂ ಭಾರತೀಯತೆ ಇಲ್ಲ ಎಂದು ಬರೆದಿದ್ದು ನಿಜವಲ್ಲವೇ? ಭಾರತ ಸಂವಿಧಾನದ ಪಿತಾಮಹ ಡಾ. ಬಿ.ಆರ್‌ ಅಂಬೇಡ್ಕರ್ ವಿರುದ್ಧವಾಗಿ ಮನುಸ್ಮೃತಿಯನ್ನು ಬೆಂಬಲಿಸಿದ್ದೂ ಸತ್ಯವಲ್ಲವೇ ಎಂದು ಖರ್ಗೆ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ಸುಪ್ರೀಂಕೋರ್ಟ್‌ನ 5 ಹಾಲಿ ನ್ಯಾಯಾಧೀಶರು ಸಾರ್ವಜನಿಕ ಪತ್ರಿಕಾಗೋಷ್ಠಿ ನಡೆಸಿ ನ್ಯಾಯಾಲಯದಲ್ಲಿ ನಿಮ್ಮ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು ಸಂವಿಧಾನದ ಕೊಲೆಯಲ್ಲದಿದ್ದರೆ ಮತ್ತನು? ನಿಮ್ಮ ಸರ್ಕಾರ ಶೇ 95ರಷ್ಟು ವಿರೋಧ ಪಕ್ಷದ ನಾಯಕರ ಮೇಲೆ ಇ.ಡಿ, ಸಿಬಿಐ, ಐಟಿ ದಾಳಿ ನಡೆಸಿದ್ದು, ಚುನಾಯಿತ ಸರ್ಕಾರಗಳನ್ನು ಉರುಳಿಸಿದ್ದು, ಚುನಾವಣೆಗೆ ಎರಡು ವಾರಗಳ ಮೊದಲು ದೇಶದ ಪ್ರಮುಖ ವಿರೋಧ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದ್ದು, ಸಂವಿಧಾನದ ಕೊಲೆಯಲ್ಲದೆ ಮತ್ತೇನು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಅನ್ನದಾತರ ಮೇಲೆ ಮೂರು ಕರಾಳ ಕಾನೂನುಗಳನ್ನು ಹೇರಿ, ಅವರನ್ನು ಒಂದು ವರ್ಷ ದೆಹಲಿಯ ಹೊಸ್ತಿಲಲ್ಲಿ ನೋವಿನಿಂದ ಕುಳಿತುಕೊಳ್ಳುವಂತೆ ಮಾಡಿದ್ದೀರಿ. ಅವರ ಮೇಲೆ ಲಾಠಿ ಪ್ರಹಾರ, ಡ್ರೋನ್‌ಗಳಿಂದ ಅಶ್ರುವಾಯು ಪ್ರಯೋಗಿಸಿದ್ದು ಸಂವಿಧಾನದ ಕೊಲೆಯಲ್ಲದೆ ಮತ್ತೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಜಾರಿಗೆ ತರಲು ಬಯಸುತ್ತಿದ್ದಾರೆ. ಇದರಿಂದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳ ಮೇಲೆ ದಾಳಿ ಮಾಡಬಹುದು. ಅದಕ್ಕಾಗಿಯೇ ಸಂವಿಧಾನದಂತಹ ಪವಿತ್ರ ಪದದ ಜೊತೆಗೆ ಕೊಲೆಯಂತಹ ಪದವನ್ನು ಸೇರಿಸಿ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

Join Whatsapp
Exit mobile version