Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ವೈದ್ಯೆಯ ಕತ್ತುಸೀಳಿ ಹತ್ಯೆ | ಮಕ್ಕಳ ಮೇಲೂ ದಾಳಿ

ಉತ್ತರ ಪ್ರದೇಶದಲ್ಲಿ ವೈದ್ಯೆಯ ಕತ್ತುಸೀಳಿ ಹತ್ಯೆ | ಮಕ್ಕಳ ಮೇಲೂ ದಾಳಿ

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ 38ರ ಹರೆಯದ ಮಹಿಳೆ, ದಂತ ವೈದ್ಯೆಯೊಬ್ಬರನ್ನು ವ್ಯಕ್ತಿಯೊಬ್ಬ ಹಾಡಹಗಲೇ ಮನೆಯೊಳಗೆ ಕತ್ತು ಸೀಳಿ ಹತ್ಯೆಗೈದ ಘಟನೆ ನಡೆದಿದೆ. ಮಹಿಳೆಯ 8 ಮತ್ತು 4 ವರ್ಷದ ಇಬ್ಬರು ಮಕ್ಕಳು ಇನ್ನೊಂದು ಕೋಣೆಯಲ್ಲಿದ್ದು, ಅವರ ಮೇಲೂ ದಾಳಿ ನಡೆಸಲಾಗಿದೆ.

ಕೇಬಲ್ ಟಿವಿ ಸೆಟ್ ಟಾಪ್ ಬಾಕ್ಸ್ ರಿಚಾರ್ಜ್ ನೆಪವೊಡ್ಡಿ ಮನೆಯೊಳಗೆ ಪ್ರವೇಶಗೈದು ದುಷ್ಕರ್ಮಿಯು ಈ ದುಷ್ಕೃತ್ಯ ಎಸಗಿದ್ದಾನೆ. ಮೃತ ವೈದ್ಯೆಯನ್ನು ಡಾ. ನಿಶಾ ಸಿಂಘಾಲ್ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ದುಷ್ಕರ್ಮಿಯನ್ನು ಶುಭಂ ಪಾಠಕ್ ಎಂದು ಗುರುತಿಸಲಾಗಿದೆ.

ದರೋಡೆಗೈಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಿಂದ ಆಕ್ರೋಶಗೊಂಡಿರುವ ಪ್ರತಿಪಕ್ಷಗಳು ಆಡಳಿತಾರೂಢ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವನ್ನು ಟೀಕಿಸಿವೆ.

ಆಗ್ರಾದಲ್ಲಿ ನಡೆದಿರುವ ಈ ಘಟನೆಯಿಂದ ರಾಜ್ಯವೇ ಆಘಾತಕ್ಕೊಳಗಾಗಿದೆ. ಜನ ನಿಭಿಡ ಪ್ರದೇಶದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಹತ್ಯೆ ನಡೆದಿದೆ. ಬಿಜೆಪಿ ಸರಕಾರ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಮತ್ತು ಪ್ರತಿಪಕ್ಷದ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವಲ್ಲಿ ಬ್ಯುಸಿಯಾಗಿದೆ. ರಾಜ್ಯ ಸರಕಾರ ತನ್ನ ಬಗ್ಗೆ ಟಿವಿಗಳಲ್ಲಿ ಜಾಹೀರಾತು ನೀಡುವ ಬದಲು, ಉತ್ತರ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

Join Whatsapp
Exit mobile version