ಮುಂಬರುವ ದಿನಗಳಲ್ಲಿ ತುಳು ರಾಜ್ಯ ಭಾಷೆ: ಶಾಸಕ ವೇದವ್ಯಾಸ ಕಾಮತ್

Prasthutha|

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಅದರ ಫಲವಾಗಿ ಮುಂಬರುವ ದಿನಗಳಲ್ಲಿ ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನಗಳು ಲಭಿಸಲಿವೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಹರ್ಷ ವ್ಯಕ್ತಪಡಿಸಿದರು.

- Advertisement -

ಅವರು ಶುಕ್ರವಾರ ನಗರದ ತುಳು ಭವನದಲ್ಲಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 360 ಲಕ್ಷ ರೂ.ಗಳ ಅನುದಾನದಿಂದ ನಿರ್ಮಿಸಲಾದ ತುಳುಭವನದ ಹೆಚ್ಚುವರಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

  ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಹಲವಾರು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ, ಅದಕ್ಕೆ ಹಲವು ಹಂತಗಳು ಇವೆ, ಆ ಪ್ರಕ್ರಿಯೆಗಳೆಲ್ಲಾ ಸಾಗುತ್ತಿದ್ದು, ಅದಕ್ಕೆ ಸಮಯ ಬೇಕಿರುವ ಕಾರಣ ಮುಂಬರುವ ದಿನಗಳಲ್ಲಿ ಆ ಪ್ರಯತ್ನ ಫಲಕಾರಿಯಾಗಲಿದೆ, ಈ ಪ್ರಯತ್ನವನ್ನು ಕೈ ಬಿಡುವುದಿಲ್ಲ, ಅದಕ್ಕೆ ತುಳುನಾಡ ಜನರ ಪ್ರಾಮಾಣಿಕ ಹೋರಾಟವೂ ಇದೆ ಎಂದರು.

- Advertisement -

 ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಅವರು ಮಾತನಾಡಿ, ಕನ್ನಡ – ತುಳು ಸಹೋದರ ಭಾಷೆಗಳು, ಈ ಎರಡು ಭಾಷೆಗಳ ನಡುವೆ ಸಾಮರಸ್ಯದ ಕೂಟವಿದೆ. ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವಿನಲ್ಲಿ ಗ್ರಾಮೀಣ ಪ್ರದೇಶದ ಮಣ್ಣಿನ ಸೊಗಡಿದೆ, ಮೂಲತಃ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಯ ಬಳಕೆ ಹೆಚ್ಚು ಎಂದು ಹೇಳಿದರು.

ಹಲವಾರು ತುಳು ಶಾಸನಗಳು ಲಭ್ಯವಿದೆ, ಪ್ರಪಂಚದಲ್ಲಿ ಎರಡು ಕೋಟಿ ಜನರು ತುಳು ಮಾತನಾಡುವವರನ್ನು ಕಾಣಬಹುದಾಗಿದ್ದು, ವಿದೇಶದಲ್ಲಿರುವ ಹೆಚ್ಚಿನ ಸಂಖ್ಯೆಯ ಕನ್ನಡಿಗರಲ್ಲಿ ತುಳುವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮ, ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್, ರಾಧಾಕೃಷ್ಣ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ದಿನೇಶ್ ಸುವರ್ಣಾ ರಾಯಿ ನಿರೂಪಿಸಿ, ವಂದಿಸಿದರು.

Join Whatsapp