ಉತ್ತರಾಖಂಡ ಮುಖ್ಯಮಂತ್ರಿಯಾಗಿ ತೀರತ್ ಸಿಂಗ್ ರಾವತ್ ; ಸಂಜೆ 4ಕ್ಕೆ ಪ್ರಮಾಣ ವಚನ

Prasthutha|

- Advertisement -

ಡೆಹ್ರಾಡೂನ್​:  ಉತ್ತರಾಖಂಡದ ಮುಖ್ಯಮಂತ್ರಿಯಾಗಿ ತೀರತ್ ಸಿಂಗ್ ರಾವತ್ ಅವರು ಆಯ್ಕೆಯಾಗಿದ್ದಾರೆ. ತೀರತ್​ ಸಿಂಗ್​ ಅವರು ಇಂದು ಸಂಜೆ ನಾಲ್ಕು ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತೀರತ್​ ಅವರು ಫೆ. 9, 2013 ರಿಂದ ಡಿಸೆಂಬರ್​ 31, 2015ರವರೆಗೂ ಉತ್ತರಖಂಡದ ಬಿಜೆಪಿ ಮುಖ್ಯಸ್ಥರಾಗಿದ್ದರು. 2012 ರಿಂದ 2017ರವರೆಗೆ ಉತ್ತರಖಂಡದ ಚೌಬ್ತಖಾಲ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ಗರ್ವಾಲ್​ ಕ್ಷೇತ್ರದ ಸಂಸದರಾಗಿದ್ದಾರೆ.

- Advertisement -

ತ್ರಿವೇಂದ್ರ ಸಿಂಗ್​ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರಿಗೆ ಮಂಗಳವಾರ ಸಂಜೆ ರಾಜೀನಾಮೆ ಪತ್ರ ನೀಡಿದ ಬಳಿಕ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಬಿಜೆಪಿ ನನಗೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ನಾನು ಋಣಿಯಾಗಿದ್ದೇನೆ ಎಂದು ಅವರು ಹೇಳಿದ್ದರು.

ರಾಜೀನಾಮೆಗೆ ಕಾರಣವೇನೆಂದು ಕೇಳಿದಾಗ, ಅದಕ್ಕೆ ಕಾರಣವನ್ನು ನೀವು ದೆಹಲಿಯಲ್ಲಿರುವ ಬಿಜೆಪಿ ನಾಯಕರನ್ನು ಕೇಳಬೇಕು ಎಂದಿದ್ದರು. ಪಕ್ಷದಲ್ಲಿನ ಎಲ್ಲಾ ನಿರ್ಧಾರಗಳನ್ನು ಸಾಮೂಹಿಕ ರೀತಿಯಲ್ಲಿ ತೆಗೆದುಕೊಳ್ಳಲಾಗುವುದರಿಂದ ಬೇರೊಬ್ಬರಿಗೆ ಅಧಿಕಾರವನ್ನು ರವಾನಿಸಬೇಕು ಎಂದು ಪಕ್ಷವು ಒಟ್ಟಾಗಿ ನಿರ್ಧರಿಸಿದೆ. ಅದಕ್ಕೆ ಕಾರಣವನ್ನು ನೀವು ದೆಹಲಿಯಲ್ಲೇ ಕೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು.

ತ್ರಿವೇಂದ್ರ ಅವರ ಕಾರ್ಯಶೈಲಿ ವಿಭಿನ್ನವಾಗಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಹಲವಾರು ಉತ್ತರಾಖಂಡ ಮಂತ್ರಿಗಳು ಮತ್ತು ಶಾಸಕರು ಹೈ ಕಮಾಂಡ್​ಗೆ ಮನವಿ ಮಾಡಿದ್ದರು ಎನ್ನಲಾಗಿದೆ.

Join Whatsapp