Home ಟಾಪ್ ಸುದ್ದಿಗಳು ವಯನಾಡಿನಲ್ಲಿ ಕಳ್ಳರ ಹಾವಳಿ ಆರಂಭ

ವಯನಾಡಿನಲ್ಲಿ ಕಳ್ಳರ ಹಾವಳಿ ಆರಂಭ

ವಯನಾಡು: ಭಾರೀ ದುರಂತದಿಂದ ನಲುಗಿ ಹೋಗಿರುವ ಕೇರಳದ ವಯನಾಡಿನಲ್ಲಿ ಇದೀಗ ಕಳ್ಳರ ಹಾವಳಿ ಆರಂಭವಾಗಿದೆ ಎಂದು ತಿಳಿದುಬಂದಿದೆ. ಭೂಕುಸಿತದಲ್ಲಿ ನಿರಾಶ್ರಿತವಾಗಿರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗುತ್ತಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.

ಭೂಕುಸಿತದ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ತೊರೆದು ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಆದರೆ ಪರಿಸ್ಥಿತಿ ಅವಲೋಕನಕ್ಕಾಗಿ ಮನೆಯ ಬಳಿ ತೆರಳಿದ್ದಾಗ ಬಾಗಿಲುಗಳು ಮುರಿದುಕೊಂಡಿತ್ತು, ಬಟ್ಟೆಗಳು ಹಾಗೂ ಕೆಲವು ವಸ್ತುಗಳು ನಾಪತ್ತೆಯಾಗಿವೆ ಎಂದು ಸಂತ್ರಸ್ತರೊಬ್ಬರು ಹೇಳಿದ್ದು ವರದಿಯಾಗಿದೆ.

ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ ಪ್ರದೇಶಕ್ಕೆ ನುಗ್ಗುವವರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಕೆಲ ಸಂತ್ರಸ್ತರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈಗ ಮನೆಗಳಲ್ಲಿ ಅಳಿದುಳಿದ ವಸ್ತುಗಳೂ ಕೂಡ ಕಳ್ಳರ ಪಾಲಾಗುತ್ತಿವೆ. ನಾವು ತಂಗಿರುವ ರೆಸಾರ್ಟ್‌ನಲ್ಲಿರುವ ಅವರ ಕೊಠಡಿಯನ್ನು ಕೂಡ ಕಳ್ಳರು ಗುರಿಯಾಗಿಸಿಕೊಂಡು ಅವರ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ ಎಂದು ಅವರು ದೂರಿದ್ದಾರೆ.

ದುರಂತ ನಡೆದ ಸ್ಥಳದಲ್ಲಿ ಜನವಸತಿ ಇರದ ಕಾರಣ ಕಳ್ಳರು ಅದರ ಲಾಭ ಪಡೆದುಕೊಳ್ಳುತ್ತಿದ್ದು, ಮನೆಯಲ್ಲಿನ ಮೌಲ್ಯಯುತ ವಸ್ತುಗಳು ಕಳ್ಳತನವಾಗುತ್ತಿವೆ. ಹೀಗಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆ ಘಟನೆ ನಡೆದ ಸ್ಥಳಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

Join Whatsapp
Exit mobile version