Home ಟಾಪ್ ಸುದ್ದಿಗಳು ನಾಯಕ ಸಮಾಜದ ಸಮಾನ ಮನಸ್ಕರಿಂದ ವಿಧಾನ ಸೌಧ ಚಲೋ ಚಳವಳಿ

ನಾಯಕ ಸಮಾಜದ ಸಮಾನ ಮನಸ್ಕರಿಂದ ವಿಧಾನ ಸೌಧ ಚಲೋ ಚಳವಳಿ

ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಜಾರಿಗೊಳಿಸುವುದು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕಿವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ನಾಯಕ ಸಮಾಜದ ಸಮಾನ ಮನಸ್ಕರು ವಿಧಾನ ಸೌಧ ಚಲೋ ನಡೆಸಿದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಟ ಪ್ರತಿಭಟನಕಾರರು, ಫ್ರೀಡಂ ಪಾರ್ಕ್ ಬಳಿ ಇರುವ ಮಹಾರಾಣಿ ಕಾಲೇಜು ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ನಡೆಸಿದರು.

ಈ ವೇಳೆ ನ್ಯಾ. ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿರುವ ಸಮಾನ ಮನಸ್ಕರು, ಶೇ.7.5 ಮೀಸಲಾತಿ ಜಾರಿಗೆ ಈಗಾಗಲೇ ನ್ಯಾ.ನಾಗಮೋಹನ್ ದಾಸ್ ವರದಿ ನೀಡಿದ್ದಾರೆ. ಆದರೆ ವರದಿ ಜಾರಿಗೊಳಿಸುತ್ತೇವೆ ಎಂದು ಸುಳ್ಳು ಹೇಳಿರುವ ರಾಜ್ಯ ಸರ್ಕಾರ, ಕೊಟ್ಟ ಮಾತು ತಪ್ಪಿ ವಚನಭ್ರಷ್ಟವಾಗಿದೆ ಎಂದು ಗರಂ ಆದರು.

ಉತ್ತರ ಕರ್ನಾಟಕ ಭಾಗ ಸೇರಿದಂತೆ ಇಡೀ ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಂಡು ನಕಲಿ ಜಾತಿ ಪ್ರಮಸಣ ಪತ್ರಗಳ ಹಾವಳಿ ತಡೆಯಬೇಕು. ಆದರೆ ಅದು ಬಿಟ್ಟು ಸರ್ಕಾರ ಈಗ ತಳವಾರ, ಪರಿವಾರವನ್ನು ಪರಿಶಿಷ್ಟ ಸಂಗಡಕ್ಕೆಸೇರಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಮತ್ತಷ್ಟುಗಳು ಸಮಸ್ಯೆಗಳು ಉದ್ಭವವಾಗಿವೆ. ಈ ಸಮಸ್ಯೆಗೂ ತಕ್ಷಣ ಸ್ಪಷ್ಟತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಹಿಂದೆ ವಾಲ್ಮೀಕಿ ಸಮುದಾಯಕ್ಕಾಗಿ ಮೀಸಲಿಟ್ಟಿದ್ದ ಹಣದಲ್ಲಿ ಶೇ.70ರಷ್ಟು ಅನುದಾನವನ್ನು ಪುನಃ ಸೇರಿಸಿ ಈ ಬಾರಿಯ ಬಜೆಟ್ನಲ್ಲಿ ಸೇರಿಸಿ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಬೇಕು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ನಾಯಕ ಸಮಾಜದ ಸಮಾನ ಮನಸ್ಕರು ಹಾಗೂ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ಆಗ್ರಹಿಸಿದರು.

ಪರಿಶಿಷ್ಟ ಪಂಗಡ ಸಮುದಾಯದ ಆದಿ ಕವಿ, ವಾಲ್ಮೀಕಿ ಸೃಷ್ಟಿಸಿದ ರಾಮನನ್ನು ಇಡೀ ಜಗತ್ತೇಗ ಈಗ ಪೂಜಿಸುತ್ತಿದೆ. ಆದರೆ ರಾಮನನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯನ್ನು ಕಡೆಗಣಿಸಲಾಗುತ್ತಿದೆ. ಅಯೋಧ್ಯೆಯ ರಾಮಮಂದಿರದ ಎದುರು ವಾಲ್ಮೀಕಿ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ನಾಯಕ ಸಮಾಜದ ಸಮಾನ ಮನಸ್ಕರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು, ತುಮಕೂರಿನ ಭರತ್, ಜಯಸಿಂಹ, ಮಾರಣ್ಣ ಪಾಳೇಗಾರ, ಕುಪ್ಪೂರು ಶ್ರೀಧರ್, ಸಿಂಹ ಘರ್ಜನೆ ವೇದಿಕೆಯ ಮಾಲೂರು ವೆಂಕಟೇಶ್, ಪರಶುರಾಮ್, ಭಾರತಿ, ರಾಯಚೂರಿನ ಶರಣಬಸಪ್ಪ, ರಜನಿ ಎಂ.ಆರ್., ನೆಲಮಂಗಲದ ಅಶೋಕ್, ರವಿ ವಾಲ್ಮೀಕಿ ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮುಖಂಡರು ಭಾಗವಹಿಸಿದ್ದರು.

Join Whatsapp
Exit mobile version