Home ಟಾಪ್ ಸುದ್ದಿಗಳು ದೆಹಲಿ ವಾಯಮಾಲಿನ್ಯದ ಪರಿಣಾಮ ಉತ್ತರ ಪ್ರದೇಶಕ್ಕೂ ವ್ಯಾಪಿಸುತ್ತಿದೆ: ಅಖಿಲೇಶ್ ಯಾದವ್

ದೆಹಲಿ ವಾಯಮಾಲಿನ್ಯದ ಪರಿಣಾಮ ಉತ್ತರ ಪ್ರದೇಶಕ್ಕೂ ವ್ಯಾಪಿಸುತ್ತಿದೆ: ಅಖಿಲೇಶ್ ಯಾದವ್

ಲಖನೌ: ದೆಹಲಿ ವಾಯುಮಾಲಿನ್ಯ ಸಮಸ್ಯೆಯನ್ನು ‘ವಾರ್ಷಿಕ ವಿಷಯ’ ಎಂದು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅದರ ಪರಿಣಾಮಗಳು ಉತ್ತರ ಪ್ರದೇಶವನ್ನು ವ್ಯಾಪಿಸಲು ಪ್ರಾರಂಭಿಸಿವೆ ಎಂದು ಆತಂಕ ಹೊರಹಾಕಿದ್ದಾರೆ.


ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ‘ಇದೀಗ ದೆಹಲಿಯ ವಾಯು ಮಾಲಿನ್ಯ ಸಮಸ್ಯೆಯು ವಾರ್ಷಿಕ ವಿಷಯವಾಗಿದೆ. ರಾಷ್ಟ್ರ ರಾಜಧಾನಿಯ ಪರಿಸರವನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದಾಗ, ದೇಶದ ಉಳಿದ ಭಾಗಗಳ ಗತಿಯೇನು? ಇದನ್ನೇ ‘ದೀಪದ ಕೆಳಗೆ ಕತ್ತಲೆ’ ಎಂದು ಕರೆಯುವುದು’ ಎಂದಿದ್ದಾರೆ.


‘ಭಾರತವನ್ನು ಕಂಡು ವಿಶ್ವವೇ ಹೆಮ್ಮೆಪಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ದೇಶದ ರಾಜಧಾನಿಯ ಚಿತ್ರಣವನ್ನು ಹೊಗೆಯಿಂದ ಮಸುಕಾಗದಂತೆ ಉಳಿಸಲು ಬಿಜೆಪಿ ನೇತೃತ್ವದ ಸರ್ಕಾರಕೆ ಸಾಧ್ಯವಾಗುತ್ತಿಲ್ಲ. ವಿಶ್ವದ ಹಲವು ದೇಶಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರ ಕಚೇರಿಗಳು ದೆಹಲಿಯಲ್ಲಿವೆ. ಇದು ಅವರಿಗೆ ಯಾವ ಸಂದೇಶವನ್ನು ನೀಡುತ್ತದೆ? ಇದು ಬಿಜೆಪಿ ಸರ್ಕಾರದ ಆಡಳಿತ ಮತ್ತು ನೀತಿಗಳ ವೈಫಲ್ಯ’ ಎಂದು ಕಿಡಿಕಾರಿದ್ದಾರೆ.


‘ಇದೀಗ ವಾಯುಮಾಲಿನ್ಯದ ಪರಿಣಾಮಗಳು ಉತ್ತರ ಪ್ರದೇಶವನ್ನು ವ್ಯಾಪಿಸಲು ಪ್ರಾರಂಭಿಸಿವೆ. ಯಮುನೆಯ ಜಲಮಾಲಿನ್ಯವಾಗಲಿ, ವಾಯುಮಾಲಿನ್ಯವಾಗಲಿ… ಸಾರ್ಜಜನಿಕರ ಆರೋಗ್ಯದ ಮೇಲೆ ಇವುಗಳ ಪರಿಣಾಮ ಬೀರುತ್ತಿದೆ. ತಾಜ್ ಮಹಲ್ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತಿದೆ. ಉತ್ತರ ಪ್ರದೇಶ ಸರ್ಕಾರ ಏನು ನಡೆದಿಲ್ಲವೆಂಬಂತೆ ವರ್ತಿಸುತ್ತಿದೆ’ ಎಂದು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಧಾರಿಸಿದ್ದ ಗಾಳಿಯ ಗುಣಮಟ್ಟವು ಭಾನುವಾರ ಮತ್ತೆ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿತ್ತು.

Join Whatsapp
Exit mobile version