Home ಟಾಪ್ ಸುದ್ದಿಗಳು ಕುಂಭಮೇಳದಲ್ಲಿ ಕೋವಿಡ್ ಮುನ್ನೆಚ್ಚರಿಕೆಯಿಲ್ಲದೆ ಲಕ್ಷಾಂತರ ಜನರ ಸಂಗಮ! ‘ತಬ್ಲೀಗಿ ಕೊರೋನಾ’ ಎಂದ ಮಾಧ್ಯಮಗಳು ಕಾಣೆ

ಕುಂಭಮೇಳದಲ್ಲಿ ಕೋವಿಡ್ ಮುನ್ನೆಚ್ಚರಿಕೆಯಿಲ್ಲದೆ ಲಕ್ಷಾಂತರ ಜನರ ಸಂಗಮ! ‘ತಬ್ಲೀಗಿ ಕೊರೋನಾ’ ಎಂದ ಮಾಧ್ಯಮಗಳು ಕಾಣೆ

ಹರಿದ್ವಾರ :  ಉತ್ತರಾಖಂಡದ ಹರಿದ್ವಾರದಲ್ಲಿ ಮಹಾಕುಂಭ ಮೇಳ ಆರಂಭವಾಗಿದ್ದು, ಲಕ್ಷೋಪಲಕ್ಷ ಮಂದಿ ಗಂಗಾ ಪವಿತ್ರ ಸ್ನಾನಕ್ಕಾಗಿ ಹರಿದ್ವಾರಕ್ಕೆ ಧಾವಿಸಿದ್ದಾರೆ. ಸಾಮಾಜಿಕ ಅಂತರ ಪಾಲಿಸದೆ ಇರುವುದರಿಂದ ಮಹಾಕುಂಭ ಮೇಳಕ್ಕೆ ಆಗಮಿಸಿದ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ ಎನ್ನಲಾಗಿದೆ.

ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಎಂದು ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ ಭಕ್ತಾದಿಗಳು ಕೇಳುತ್ತಿಲ್ಲ. ದೇಶದ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದ ಭಕ್ತಾದಿಗಳು ಸಾಮಾಜಿಕ ಅಂತರವನ್ನು ನಿರ್ವಹಿಸುವುದೆ ಇರುವುದು ಆತಂಕಕ್ಕೆ ಕಾರಣವಾಗಿದೆ.

ಹರ್ ಕಿ ಪೌರಿ ಘಾಟ್ ನಲ್ಲಿ ಸಾಮಾಜಿಕ ಅಂತರವನ್ನು ಯಾರೂ ಪಾಲಿಸುತ್ತಿಲ್ಲ ಎಂದು ಎಂದು ಹರಿದ್ವಾರದಲ್ಲಿ ಕಾರ್ಯ ನಿರತವಾಗಿರುವ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಅವರ ಹೇಳಿಕೆಯನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನ ನಿತ್ಯ ಏರಿಕೆಯಾಗುತ್ತಿದೆ. ಘಾಟ್ ನಲ್ಲಿ ಸಾಮಾಜಿಕ ಅಂತರವನ್ನು ನಿರ್ವಹಿಸುವುದಕ್ಕೆ ಪ್ರಯತ್ನ ಪಟ್ಟರೆ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇದೆ ಎಂದು ಕೂಡ ಗುಂಜ್ಯಾಲ್ ತಿಳಿಸಿದ್ದಾರೆ.

ದೇಶದಲ್ಲಿ ಕೋವಿಡ್ ಸೋಂಕಿನ ಅಲೆ ಹಠಾತ್ ಏರಿಕೆಯಾದ ಸಂದರ್ಭದಲ್ಲೇ ಸಾಮಾಜಿಕ ಅಂತರವನ್ನು ಪಾಲಿಸದೆ ಲಕ್ಷಾಂತರ ಜನರನ್ನು ಸೇರಿಸುವ ಈ ಕುಂಭ ಮೇಳಕ್ಕೆ  ಏಪ್ರಿಲ್ 1ರಿಂದ 30ರವರೆಗೂ ಅನುಮತಿ ನೀಡಿರುವ ಸರ್ಕಾರದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿಲ್ಲಿಯಲ್ಲಿ ತಬ್ಲೀಗಿ ಜಮಾಅತಿನವರು ಸಭೆ ನಡೆಸಿದ್ದಾರೆ ಎಂದು ಆರೋಪಿಸಿ ಮುಸ್ಲಿಮರಿಂದಲೇ ಇಡೀ ದೇಶದಲ್ಲಿ ಕೊರೋನಾ ಹರಡಿತು ಎಂದು ಅಪಪ್ರಚಾರ ಮಾಡುತ್ತಾ ‘ತಬ್ಲೀಗಿ ಕೊರೋನಾ’ ಎಂದು ನಿರಂತರವಾಗಿ ವಾರ್ತೆ ನೀಡುತ್ತಿದ್ದ ಮಾಧ್ಯಮಗಳು ಈಗ ಕಾಣೆಯಾಗಿದ್ದಾರೆಯೇ? ಎಂಬುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಪ್ರಶ್ನೆ.

.

Join Whatsapp
Exit mobile version