ಸೂರ್ಯಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭ

Prasthutha|

ಬೆಂಗಳೂರು: ಮಾನವ ಸಮುದಾಯವು ಕ್ಷೇಮವಾಗಿ ಬದುಕಿ ಉಳಿಯಬೇಕಾದರೆ ನಾವು ಬಳಸುವ ಇಂಧನ ಮೂಲವನ್ನು ಬದಲಿಸಬೇಕಾಗಿದೆ. ವಿಕೇಂದ್ರೀಕೃತ ಮಾದರಿಯಲ್ಲಿ ಹಸಿರು ಇಂಧನವನ್ನು ಬಳಸುವುದರಿಂದ ಜಾಗತಿಕ ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಿಷಿಹುಡ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ಪ್ರಭು ಹೇಳಿದರು.

- Advertisement -


ನಗರದ ಅಂಬೇಡ್ಕರ್ ಭವನದಲ್ಲಿ ಸೆಲ್ಕೋ ಫೌಂಡೇಶನ್ ವತಿಯಿಂದ ನಡೆದ ಸೂರ್ಯ ಮಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜಾಗತಿಕ ಹವಾಮಾನ ಬದಲಾವಣೆಗೆ ಗಡಿಗಳ ಹಂಗಿಲ್ಲ. ನದಿಗಳು ಬರಿದಾಗುತ್ತಿವೆ. ಪ್ರವಾಹಗಳಿಂದ ದೇಶಗಳು ತತ್ತರಿಸುವುದನ್ನು ನೋಡಿದ್ದೇವೆ. ಇವೆಲ್ಲವನ್ನು ತಡೆಯಲು ಹಸಿರ ಇಂಧನ ಬಳಕೆ ಸಹಕಾರಿ ಆಗಬಲ್ಲುದು ಎಂದರು.
ಕೆಲವು ದಶಕಗಳ ಹಿಂದೆ ವಿದ್ಯುತ್ ಉತ್ಪಾದನೆಗೆ ಸರ್ಕಾರದ ಅನುಮತಿ ಬೇಕಾಗಿತ್ತು. ಆಗೆಲ್ಲ ವಿದ್ಯುತ್ ಗಾಗಿ ಜನರು ಸರ್ಕಾರವನ್ನು ಅವಲಂಬಿಸಬೇಕಾಗಿತ್ತು. ಆದರೆ ಸರ್ಕಾರದ ಉತ್ಪಾದನ ಸಾಮರ್ಥ್ಯ ಸೀಮಿತವಾಗಿತ್ತು. ಆದರೆ ಸೆಲ್ಕೋದಂತಹ ಸಂಸ್ಥೆಯು 26 ವರ್ಷಗಳ ಹಿಂದೆಯೇ ದೂರದೃಷ್ಟಿಯಿಂದ ಹಸಿರು ಇಂಧನ ಉತ್ಪಾದನೆ ಮತ್ತು ಅದರಿಂದ ಬಡತನ ನಿರ್ಮೂಲನೆಯ ಪ್ರಯತ್ನ ಮಾಡಿದರು. ಇಂದು ಜನಸಾಮಾನ್ಯರೂ ಕೂಡ ವಿದ್ಯುತ್ ಉತ್ಪಾದಿಸಬಹುದಾಗಿದೆ. ಅದರಲ್ಲಿಯೂ ರೈತರಿಗೆ ವಿದ್ಯುತ್ ಒದಗಿಸಿದಲ್ಲಿ ಅತೀ ಹೆಚ್ಚಿನ ಸಹಾಯವಾಗುತ್ತದೆ. ಅಂತಹ ಮಾದರಿಗಳನ್ನು ಸೆಲ್ಕೊ ಬಹಳ ಹಿಂದೆಯೇ ರೂಪಿಸಿದ್ದು ಇಂದು ಅವು ಮಾದರಿಯಾಗಿವೆ ಎಂದರು.


ಇತ್ತೀಚೆಗೆ ಖಾಸಗಿ ವಲಯದ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲರಿಗೂ ಇಂಧನದ ಅಗತ್ಯವಿದೆ. ಆದ್ದರಿಂದ ಹಸಿರು ಇಂಧನದ ಮೇಲೆ ಸರ್ಕಾರವು ತೆರಿಗೆ ವಿಧಿಸುವಾಗ ಕನಿಷ್ಠ ಪ್ರಮಾಣವನ್ನು (ಥ್ರೆಶೋಲ್ಡ್) ನಿಗದಿ ಮಾಡಬೇಕು ಎಂದರು.
2020ರ ಸೂರ್ಯ ಮಿತ್ರ ಪ್ರಶಸ್ತಿಯನ್ನು ನೆವೆಲ್ಲೆ ವಿಲಿಯಮ್ಸ್ ಅವರಿಗೆ, 2021ರ ಸಾಲಿನ ಪ್ರಶಸ್ತಿಯನ್ನು ರಿಚೆಂಡಾ ವಾನ್ ಲೀವೆನ್ ಅವರಿಗೆ ಹಾಗೂ 2022ನೇ ಸಾಲಿನ ಪ್ರಶಸ್ತಿಯನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಗೆ ನೀಡಲಾಯಿತು. ಈ ಸಂಸ್ಥೆಯ ಪರವಾಗಿ ಎಂ. ಎ. ಬಾಲಸುಬ್ರಮಣ್ಯ ಹಾಗೂ ಸಿಇಒ ಜಿ.ಎಸ್. ಕುಮಾರ್ ಸ್ವೀಕರಿಸಿದರು.
ಸಿಲ್ಕೋ ಇಂಡಿಯಾದ ನಿರ್ದೇಶಕರಾದ ಹರೀಶ್ ಹಂದೆ ಮಾತನಾಡಿ, “ಶಕ್ತಿಯ ವಿಕೇಂದ್ರೀಕರಣವೊಂದೇ ಹಸಿರು ಇಂಧನವನ್ನು ಬಡವರ ಬಳಿಗೆ ಕೊಂಡೊಯ್ಯಲು ಇರುವ ಪರಿಹಾರ. ಸರ್ಕಾರವು ನೀತಿ ನಿರೂಪಣೆಯಲ್ಲಿ ಹಸಿರ ಇಂಧನದ ಪರವಾದ ಕ್ರಮಗಳನ್ನ ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮಾಧ್ಯಮಗಳೂ ಸೇರಿದಂತೆ ಸಾಕಷ್ಟು ಒತ್ತಡ ಹಾಕಲಾಗುತ್ತಿದೆ. ನಮ್ಮ ದೇಶದ ಹಳ್ಳಿಯೊಂದರಲ್ಲಿ ರೂಪುಗೊಳ್ಳುವ ಮಾದರಿಯು ವಿದೇಶಗಳಿಗೂ ಮಾದರಿಯಾಗಬೇಕು. ಅದೇ ರೀತಿ ಇಲ್ಲಿನ ವೈಫಲ್ಯಗಳೂ ಇತರರ ಸಾಧನೆಯ ಹಾದಿಯಲ್ಲಿ ಪಾಠವಾಗಬೇಕು ಎಂದರು.
ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಸಮಾಜದ ಅಂಚಿನಲ್ಲಿರುವ ವರ್ಗವು ಸೌರ ಇಂಧನವನ್ನು ಬಳಸಲು ಮುಂದಾಗುವ ಸಂದರ್ಭದಲ್ಲಿ ಸರ್ಕಾರವು ಹಸಿರು ಇಂಧನದ ಮೇಲೆ ಶೇ. 12 ರಷ್ಟು ಜಿಎಸ್ ಟಿ ಹಾಕಿದೆ. ಆದರೆ ಕಲ್ಲಿದ್ದಲಿನ ಮೇಲೆ ಸಬ್ಸಿಡಿಯನ್ನು ಹೆಚ್ವಿಸಿದೆ. ಈ ತಾರತಮ್ಯ ಹೋಗಬೇಕು. 100 ವ್ಯಾಟ್ ಗಿಂತ ಕಡಿಮೆ ಸಾಮರ್ಥ್ಯದ ಸೌರ ಮಾದರಿಗಳಿಗೆ ಜಿಎಸ್ ಟಿವಿಧಿಸಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು.

- Advertisement -


ಸೆಲ್ಕೋ ಸಂಸ್ಥೆಯ ಸಾಧನೆಗಳನ್ನು ಬಿಂಬಿಸುವ ‘ಶಕ್ತಿಪಥ’ ಪುಸ್ತಕವನ್ನು ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್ಮೆಂಟ್ ಅಂಡ್ ವಾಟರ್ ನ ಸಿಇಒ ಡಾ. ಅರುಣಾಭ ಘೋಷ್ ಬಿಡುಗಡೆ ಮಾಡಿದರು.
ಸೆಲ್ಕೋ ಫೌಂಡೇಷನ್ ನ ಸಾಧನೆಗಳನ್ನು ಬಿಂಬಿಸುವ ‘ಎನರ್ಜೈಸಿಂಗ್ ಲೈವ್ಲಿಹುಡ್’ ಪುಸ್ತಕವನ್ಮು ಸುರೇಶ್ ಪ್ರಭು ಅವರು ಬಿಡುಗಡೆ ಮಾಡಿದರು.
ಸೆಲ್ಕೋ ಇಂಡಿಯಾದ 2020-21ನೇ ಸಾಲಿನ ಚಾಂಪಿಯನ್ ಪ್ರಶಸ್ತಿ ಹಾಸನ ತಂಡ, 2021-22 ನೇ ಸಾಲಿನ ಚಾಂಪಿಯನ್ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರ ತಂಡ ಪಡೆದುಕೊಂಡಿತು.
ವೇದಿಕೆಯಲ್ಲಿ ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಥಾಮಸ್ ಪುಲ್ಲೆಂಕೇವ್, ಪ್ರೊ. ಎಂ.ಎಸ್. ಶ್ರೀರಾಮ್, ಸೆಲ್ಕೋ ಫೌಂಡೇಷನ್ ನ ನಿರ್ದೇಶಕರಾದ ಹುಧಾ ಜಾಫರ್, ಚೀಫ್ ಫೈನಾನ್ಸ್ ಆಫೀಸರ್ ಜೋಬಿ ವಿ.ಕೆ. ಉಪಸ್ಥಿತರಿದ್ದರು.
ಸೆಲ್ಕೋ ಫೌಂಡೇಷನ್ ಸಿಇಒ ಡಾ. ಹರೀಶ ಹಂದೆ, ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಥಾಮಸ್ ಪುಲ್ಲೆಂಕೇವ್, ಪ್ರೊ. ಎಂ.ಎಸ್. ಶ್ರೀರಾಮ್, ಸಿಇಒ ಮೋಹನ ಭಾಸ್ಕರ ಹೆಗಡೆ, ಎಸ್ ವಿ ವೈ ಎಂ ಸಂಸ್ಥೆಯ ಎಂ. ಎ. ಬಾಲಸುಬ್ರಮಣ್ಯ, ಸೆಲ್ಕೋ ಫೌಂಡೇಷನ್ ನ ಮುಖ್ಯ ಹಣಕಾಸು ಅಧಿಕಾರಿ ವಿ.ಕೆ. ಜೋಬಿ ಹಾಗೂ ನಿರ್ದೇಶಕರಾದ ಹುದಾ ಜಾಫರ್ ಉಪಸ್ಥಿತರಿದ್ದರು.
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯ ಬಲಪಡಿಸುತ್ತಿರುವ ಸರ್ಕಾರೇತರ ಸಂಸ್ಥೆಯಾದ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಗೆ ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ಸೂರ್ಯ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೇಂದ್ರದ ಮಾಜಿ ಸಚಿವ ಸುರೇಶ ಪ್ರಭು, ಸಿಇಇಡಬ್ಲ್ಯು ಸಿಇಒ ಡಾ. ಅರುಣಾಭ ಘೋಷ್, ಸೆಲ್ಕೋ ಫೌಂಡೇಷನ್ ಸಿಇಒ ಡಾ. ಹರೀಶ ಹಂದೆ, ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಥಾಮಸ್ ಪುಲ್ಲೆಂಕೇವ್, ಪ್ರೊ. ಎಂ.ಎಸ್. ಶ್ರೀರಾಮ್, ಸಿಇಒ ಮೋಹನ ಭಾಸ್ಕರ ಹೆಗಡೆ, ಸೆಲ್ಕೋ ಫೌಂಡೇಷನ್ ನಿರ್ದೇಶಕಿ ಹುದಾ ಜಾಫರ್, ಮುಖ್ಯ ಹಣಕಾಸು ಅಧಿಕಾರಿ ವಿ.ಕೆ. ಜೋಬಿ ಉಪಸ್ಥಿತರಿದ್ದರು.

Join Whatsapp