Home ಕರಾವಳಿ ಸುರತ್ಕಲ್: ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಪರ ರಾಜಸ್ಥಾನ ಸಿಎಂ ರೋಡ್ ಶೋ; ಭಾರಿ ಜನಸ್ತೋಮ

ಸುರತ್ಕಲ್: ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಪರ ರಾಜಸ್ಥಾನ ಸಿಎಂ ರೋಡ್ ಶೋ; ಭಾರಿ ಜನಸ್ತೋಮ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರ ಪರವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಸುರತ್ಕಲ್ ನಲ್ಲಿ ರೋಡ್ ಶೋ ನಡೆಸಿ ಬಿರುಸಿನ ಮತಯಾಚನೆ ನಡೆಸಿದ್ದಾರೆ. ಕಾರ್ಯಕ್ರಮವು ಅಪಾರ ಜನಸ್ತೋಮಕ್ಕೆ ಸಾಕ್ಷಿಯಾಯಿತು.

ರೋಡ್ ಶೋನಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಇನಾಯತ್ ಅಲಿ ಹಿತೈಷಿಗಳು ಪಾಲ್ಗೊಂಡಿದ್ದರು. ಕಾನದಿಂದ ಆರಂಭಗೊಂಡ ರೋಡ್ ಶೋ ಸುರತ್ಕಲ್ ಜಂಕ್ಷನ್ ನಲ್ಲಿ ಸಮಾಪ್ತಿಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಪಕ್ಷ ಎಂದಿಗೂ ಧರ್ಮಗಳ ನಡುವೆ ಒಡಕನ್ನುಂಟು ಮಾಡುವ ಕೆಲಸವನ್ನು ಯಾವತ್ತೂ ಮಾಡಿಲ್ಲ. ಎಲ್ಲರನ್ನು ಸಮಾನವಾಗಿ ಕಂಡಿದೆ. ಮತದಾರ ಬಾಂಧವರು ಜಾತಿ- ಮತದ ಬೇಧವಿಲ್ಲದೆ ಇನಾಯತ್ ಆಲಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಅಭ್ಯರ್ಥಿ ಇನಾಯತ್ ಅಲಿ, ಆಸ್ಕರ್ ಫೆರ್ನಾಂಡಿಸ್ ಹಾಗೂ ಜನಾರ್ದನ ಪೂಜಾರಿ ಅವರು ನನ್ನ ರಾಜಕೀಯ ಗುರುಗಳು. ಬಿಜೆಪಿ ಜತೆಗೆ ಸೇರಿಕೊಂಡು ಕೆಲವರು ನನ್ನ ವಿರುದ್ಧ ಷಡ್ಯಂತರ ನಡೆಸುತ್ತಿದ್ದಾರೆ. ನನ್ನನ್ನು ಎದುರಿಸಲಾಗದ ಬಿಜೆಪಿ ಪಕ್ಷವು ಜೆಡಿಎಸ್ ಅಭ್ಯರ್ಥಿ ಯನ್ನು ನನ್ನ ಎದುರು ಬಿಟ್ಟಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಮಾಜಿ ಮೇಯರ್ ಗಳಾದ ಕವಿತಾ ಸನಿಲ್, ಶಶಿಧರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Join Whatsapp
Exit mobile version