ದೇಶದ್ರೋಹ ಪ್ರಕರಣ | ತರೂರ್, ಪತ್ರಕರ್ತರ ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆ

Prasthutha|

ಉತ್ತರಪ್ರದೇಶ ಸರಕಾರ ದಾಖಲಿಸಿದ್ದ ದೇಶದ್ರೋಹ ಪ್ರಕರಣದಲ್ಲಿ ಶಶಿ ತರೂರ್ ಮತ್ತು ಪತ್ರಕರ್ತರ ಬಂಧನವನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ತಡೆಹಿಡಿದಿದೆ. ಅರ್ಜಿಯನ್ನು ನ್ಯಾಯಾಲಯವು ಎರಡು ವಾರಗಳಲ್ಲಿ ಮತ್ತೆ ವಿಚಾರಣೆ ನಡೆಸಲಿದೆ.

- Advertisement -

ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿಯಲ್ಲಿ ರೈತನ ಸಾವಿಗೆ ಸಂಬಂಧಿಸಿದ ಟ್ವೀಟ್‌ಗಳ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸಂಸದ ಶಶಿ ತರೂರ್ ಮತ್ತು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಪತ್ರಕರ್ತರಾದ ಮೃಣಾಲ್ ಪಾಂಡೆ, ಜಾಫರ್ ಅಗಾ, ಪರೇಶ್ ನಾಥ್ ಮತ್ತು ಅನಂತ್ ನಾಥ್ ಕೂಡ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಸಂಪರ್ಕಿಸಿದ್ದರು. ತಮ್ಮ ವಿರುದ್ಧದ ಪ್ರಕರಣಗಳು ಬಾಲಿಶವಾಗಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿಯಲ್ಲಿ ರೈತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ತರೂರ್ ಮತ್ತು ಇತರರು ಟ್ವೀಟ್ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರತಿಭಟನಾಕಾರರು ಕೆಂಪು ಕೋಟೆಯನ್ನು ತಲುಪಿ ಧ್ವಜವನ್ನು ಹಾರಿಸಲು ಪ್ರೇರೇಪಿಸಿತು ಎಂದು ಆರೋಪಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಬಿ.ಎಸ್.ರಾಕೇಶ್ ಅವರು ನೀಡಿದ ದೂರಿನ ಮೇರೆಗೆ ಕರ್ನಾಟಕದಲ್ಲಿ ತರೂರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಪರಪ್ಪನ ಅಗ್ರಹಾರ ಪೊಲೀಸರು ದಾಖಲಿಸಿದ್ದಾರೆ. ಮಧ್ಯಪ್ರದೇಶ ಮತ್ತು ಹರ್ಯಾಣ ರಾಜ್ಯಗಳಲ್ಲಿಯೂ ತರೂರ್ ಮತ್ತು ಇತರರ ವಿರುದ್ಧ ಇದೇ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿವೆ.

Join Whatsapp