Home ಟಾಪ್ ಸುದ್ದಿಗಳು ‘ಹಿಂದೂ ಕಾರ್ಯಕರ್ತರ ಹತ್ಯೆ’ ಎಂಬ ಬಿಜೆಪಿಯ ಸುಳ್ಳಿಗೆ ದಾಖಲೆಗಳೊಂದಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

‘ಹಿಂದೂ ಕಾರ್ಯಕರ್ತರ ಹತ್ಯೆ’ ಎಂಬ ಬಿಜೆಪಿಯ ಸುಳ್ಳಿಗೆ ದಾಖಲೆಗಳೊಂದಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಬೆಂಗಳೂರು : ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೈತಿಕ ಪೊಲೀಸ್ ಗಿರಿ ಸಮರ್ಥಿಸಿಕೊಂಡ ನಡೆಯನ್ನು ತೀವ್ರವಾಗಿ ಟೀಕಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಿಮ್ಮಿಂದ ಇಂತಹ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.


ಸಿದ್ದರಾಮಯ್ಯ ಅವರು ನಿನ್ನೆ ಮಾಡಿದ್ದ ಟ್ವೀಟ್ ಗೆ ಗುರುವಾರ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, “ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಮಾಡಿದಂತೆ ನೀವು ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿಸುವ ಮೂಲಕ ಹಿಂದೂ ವಿರೋಧಿಗಳ ಆದರ್ಶಪ್ರಾಯರಾಗಿದ್ದಿರಿ. ನಾನು ನಿಮ್ಮಿಂದ ಆಡಳಿತ ಅಥವಾ ಪೊಲೀಸಿಂಗ್ ಕಲಿಯಬೇಕಿಲ್ಲ. ನಿಮ್ಮ ಸರ್ಕಾರದ ಅಡಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಕುಳಿತಿದ್ದ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸಮರ್ಥ ಪೊಲೀಸ್ ಪಡೆ ನಮ್ಮ ಬಳಿ ಇದೆ’ ಎಂದು ತಿರುಗೇಟು ನೀಡಿದ್ದರು.


ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಯಿಸಿರುವ ಸಿದ್ದರಾಮಯ್ಯ, ಕರ್ನಾಟಕದ ಮುಖ್ಯಮಂತ್ರಿಯಾಗಿ ನಿಮ್ಮಿಂದ ಇಂತಹ ಪ್ರತಿಕ್ರಿಯೆಗಳನ್ನು ನಾನು ನಿರೀಕ್ಷಿಸಲಿಲ್ಲ, ನಿಮ್ಮ ಆರ್‌ ಎಸ್‌ಎಸ್‌ ಸಂಘಟನೆಯ ಮಾಸ್ಟರ್‌ ಗಳನ್ನು ಮೆಚ್ಚಿಸುವ ಹತಾಶ ಪ್ರಯತ್ನದಲ್ಲಿ ನೀವು ಸತ್ಯ ಮತ್ತು ತರ್ಕದಿಂದ ವಿಮುಖರಾಗುತ್ತಿದ್ದೀರಿ. ನಿಮ್ಮ ಆಧಾರರಹಿತ ಆರೋಪಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದು ಈ ಹಿಂದೆ ರಾಜ್ಯದಲ್ಲಿ ನಡೆದ ಹತ್ಯೆಗಳ ವಿವರಗಳು ಮತ್ತು ಅದಕ್ಕೆ ಕಾರಣಗಳು ಇರುವ ಪಟ್ಟಿಯನ್ನು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಲಗತ್ತಿಸಿದ್ದಾರೆ.


ಹಿಂದೂ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆಪ್ತ ಸ್ನೇಹಿತ. ವಿನಾಯಕ ಬಾಳಿಗ ಅವರು ಹಿಂದೂ ಆಗಿದ್ದರು. ಈ ಸಂತ್ರಸ್ತ ಕುಟುಂಬಕ್ಕೆ ಯಾವಾಗ ನ್ಯಾಯ ಕೊಡಿಸುತ್ತೀರಿ ಬೊಮ್ಮಾಯಿಯವರೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ಪ್ರಕಾಶ್ ಕುಳಾಯಿ, ಕೇಶವ್ ಶೆಟ್ಟಿ, ಹರೀಶ್ ಪೂಜಾರಿ, ಪ್ರವೀನ್ ಪೂಜಾರಿ, ಕಲ್ಲಪ್ಪ ಹಂಡಿಬಾಗ್, ಧನ್ಯಶ್ರೀ ಮತ್ತು ದಾನಮ್ಮ ಅವರ ಹತ್ಯೆಕೋರರಿಗೆ ಶಿಕ್ಷೆ ನೀಡುವಂತೆ ನಾನು ಒತ್ತಾಯಿಸುತ್ತಿದ್ದೇನೆ. ಈ ಸಂತ್ರಸ್ತರು ಕೂಡ ಹಿಂದೂಗಳೇ ಆಗಿದ್ದಾರೆ. ಈ ಪ್ರಕರಣಗಳ ಆರೋಪಿಗಳಲ್ಲಿ ಕೆಲವರು ಸಂಘಪರಿವಾರದೊಂದಿಗೆ ಸಂಬಂಧ ಹೊಂದಿರುವವರಾಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ಸಮಾಜವಿರೋಧಿಗಳಂತೆ, ನೀವು ಕೂಡ ಭಾವನಾತ್ಮಕವಾಗಿ ದಿವಾಳಿಯಾಗಿದ್ದೀರಿ, ರಾಜಕೀಯ ಲಾಭಕ್ಕಾಗಿ ಕೋಮುವಾದದ ಮೊರೆ ಹೋಗಿದ್ದೀರಿ, ಆದರೆ ನಿಜವಾದ ಹಿಂದೂಗಳು ನಿಮ್ಮ ದೇಶದ್ರೋಹದ ಕೃತ್ಯವನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತರಿದ್ದಾರೆ. ನಮ್ಮ ಪಕ್ಷ ಬಿಡುಗಡೆ ಮಾಡಿದ ವರದಿಯನ್ನು ಆಧರಿಸಿ ತನಿಖೆ ಆರಂಭಿಸಿ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರೆ.

ನೀವು ನನ್ನಿಂದ ಆಡಳಿತ ಅಥವಾ ಪೋಲಿಸ್ ಕಲಿಯಬೇಕಾಗಿಲ್ಲ ಎಂದು ಹೇಳಿದ್ದೀರಿ. ಧನ್ಯವಾದ. ನಿಮ್ಮ ತಂದೆ ಎಸ್ ಆರ್ ಬೊಮ್ಮಾಯಿ ಅಥವಾ ನನ್ನಿಂದ ನೀವು ಏನನ್ನಾದರೂ ಕಲಿತಿದ್ದರೆ, ನೀವು ಕೇವಲ ಅಧಿಕಾರಕ್ಕಾಗಿ ಮತ್ತು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸಲು ಕೋಮುವಾದಿ ಪಕ್ಷಕ್ಕೆ ಸೇರುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ.


ನಾನು ಹಿಂದೂಗಳನ್ನು ಕೊಂದಿದ್ದೇನೆ ಎಂಬ ನೀವು ಆರೋಪ ಮಾಡಿದ್ದೀರಿ, ಮುಖ್ಯಮಂತ್ರಿಯಾಗಿರುವ ನೀವು ಇಂತಹ ಹೇಳಿಕೆ ಕೊಡುವ ಮೊದಲು ಯೋಚಿಸಬೇಕು. ನಿಮ್ಮ ಹೇಳಿಕೆ ವಿರುದ್ಧ ನನಗೆ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು. ಆದರೆ ನೀವು ಸರಿಯಾಗಿ ಎಂದು ನಾನು ಸಲಹೆ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಬಿಜೆಪಿ-ಮರೆಮಾಚಿದ ಸಂಘಪರಿವಾರದವರು ಕಾರಣರಾದ 21 ಸಾವಿನ ಪ್ರಕರಣಗಳು ಎಂಬ ವಿವರಗಳುಳ್ಳ ಕೈಪಿಡಿಯನ್ನು ಸಿದ್ದರಾಮಯ್ಯ ಟ್ವೀಟ್ ಗೆ ಲಗತ್ತಿಸಿದ್ದಾರೆ.

Join Whatsapp
Exit mobile version