Home ಟಾಪ್ ಸುದ್ದಿಗಳು ಶಿವಮೊಗ್ಗ| ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನರ ಹಿತವನ್ನೇ ಕಡೆಗಣಿಸಲಾಗಿದೆ: ಜಿಲ್ಲಾ ಕಾಂಗ್ರೆಸ್

ಶಿವಮೊಗ್ಗ| ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನರ ಹಿತವನ್ನೇ ಕಡೆಗಣಿಸಲಾಗಿದೆ: ಜಿಲ್ಲಾ ಕಾಂಗ್ರೆಸ್

ಶಿವಮೊಗ್ಗ: ಅವೈಜ್ಞಾನಿಕ ಆಸ್ತಿ ತೆರಿಗೆ ಹೆಚ್ಚಳವನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ನೇತೃತ್ವದಲ್ಲಿ ಪಾಲಿಕೆ ಮುಂದೆ  ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ  ಎಚ್‌.ಎಸ್‌. ಸುಂದರೇಶ್‌,  ಅವೈಜ್ಞಾನಿಕವಾಗಿ ನಿರ್ಧರಿಸಲಾದ ಆಸ್ತಿ ತೆರಿಗೆಯು  ಪಾವತಿಸುವವರ ಮೇಲೆ ಹೊರೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಿತವನ್ನೇ ಕಡೆಗಣಿಸಲಾಗಿದ್ದು,  ತಕ್ಷಣವೇ ಹೊಸ ತೆರಿಗೆಯ ವಿಧಾನವನ್ನು ವಾಪಸ್ ಪಡೆದು ಹಳೆ ತೆರಿಗೆಯನ್ನೇ ಮುಂದುವರಿಸಬೇಕು ಎಂದು ಪಾಲಿಕೆ ಹಾಗೂ ಸರ್ಕಾರದ ವಿರುದ್ಧ ಕಿಡಿಕಾರಿದರು.

ಜನ ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ನೀರು, ಆಸ್ತಿ ತೆರಿಗೆ ನಾಲ್ಕೈದು ಪಟ್ಟು ಹೆಚ್ಚಿಸಲಾಗಿದೆ. ಎಸ್.ಆರ್. ದರ ಹೆಚ್ಚಿಸಿದಂತೆ ತೆರಿಗೆಯನ್ನೂ ಏರಿಕೆ ಮಾಡಲಾಗಿದೆ. ಸ್ವಂತ ಮನೆಯವರೂ ಕೂಡ ಬಾಡಿಗೆ ಮನೆಯವರಂತೆ ಬಾಡಿಗೆ ಕಟ್ಟಬೇಕಾಗುತ್ತದೆ ಎಂದು ದೂರಿದರು.

ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದೆ. ಮನಸ್ಸಿಗೆ ಬಂದಂತೆ ತೆರಿಗೆ ಏರಿಕೆ ಮಾಡುತ್ತಿದೆ. ಶೇ 40 ಕಮಿಷನ್ ಎಲ್ಲಾ ಕಾಮಗಾರಿಗಳಲ್ಲೂ ಸಾಮಾನ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಸುಲಭ ತೆರಿಗೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ ರಂಗನಾಥ್, ಎಚ್.ಸಿ. ಯೋಗೀಶ್, ರಮೇಶ್ ಹೆಗ್ಡೆ, ಮೆಹಖ್ ಶರೀಫ್, ಪಕ್ಷದ ಮುಖಂಡರಾದ ರಾಮೇಗೌಡ, ಎಚ್.ಪಿ. ಗಿರೀಶ್, ವಿಜಯಲಕ್ಷ್ಮಿ ಪಾಟೀಲ್, ಇಕ್ಕೇರಿ ರಮೇಶ್, ಸ್ಟೆಲ್ಲಾ ಮಾರ್ಟಿನ್, ಎನ್.ಡಿ. ಪ್ರವೀಣ್, ಪ್ರವೀಣ್, ಕುಮರೇಶ್, ಚಂದ್ರಶೇಖರ್, ದರ್ಶನ್, ಪುಷ್ಪಕುಮಾರ್, ರೇಷ್ಮಾ, ಸುಮಾ, ಲಕ್ಷ್ಮಿ, ತಬಸ್ಸುಮ್, ನಾಜೀಮಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Join Whatsapp
Exit mobile version