ಕಸಾಪ ಚುನಾವಣೆ : ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಸಿದ ಶೇಖರಗೌಡ

Prasthutha|

- Advertisement -

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಧಾರವಾಡ ಹೈಕೋರ್ಟ್ ಪೀಠ ನೀಡಿದ ಆದೇಶದ ಪ್ರತಿಯನ್ನು ಬುಧವಾರ ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ ಅವರಿಗೆ ರಾಜ್ಯ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಅವರು ಅರ್ಪಿಸಿ ಮನವಿ ಮಾಡಿದ್ದಾರೆ.

ಹೈಕೋರ್ಟ್ ಆದೇಶದ ಪ್ರತಿ ಕೈಗೆ ಸಿಕ್ಕ ನಂತರ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಿಗದಿಪಡಿಸಲು ಮನವಿ ಮಾಡಿಕೊಳ್ಳುವಂತೆ ರಿಟ್ ಹಾಕಿದ್ದ ಶೇಖರಗೌಡರಿಗೆ ಕೋರ್ಟು ಆದೇಶಿಸಿತ್ತು. ಅದರಂತೆ ಸಹಕಾರ ಇಲಾಖೆ ಕಾರ್ಯದರ್ಶಿ, ಚುನಾವಣಾ ಅಧಿಕಾರಿ ಹಾಗೂ ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿ, ಆದಷ್ಟು ಬೇಗ ಕಸಾಪಗೆ ಚುನಾವಣೆ ನಡೆಸಬೇಕು. ಕೋವಿಡ್ ಕಾರಣಕ್ಕೆ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಪ್ರಕ್ರಿಯೆ ಶುರುಮಾಡಿ ಚುನಾವಣೆ ನಡೆಸಲು ಅವರು ಮನವಿ ಮಾಡಿದ್ದಾರೆ.

- Advertisement -

ಸಹಕಾರ ಇಲಾಖೆ‌ ಪ್ರಧಾನ ಕಾರ್ಯದರ್ಶಿ, ಚುನಾವಣಾ ಅಧಿಕಾರಿಗಳು ಮನವಿಗೆ ಸೂಕ್ತರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಶೇಖರಗೌಡ ಮಾಲಿಪಾಟೀಲ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಬಾಗಲಕೋಟೆಯ ಹೊನ್ನಯ್ಯ ಹಿರೇಮಠ, ರವೀಂದ್ರ ಕಲಬುರ್ಗಿ, ಶಿವಮೊಗ್ಗ ರಾಜು ಅವರು ಜೊತೆ ಇದ್ದರು.


ಸಂಪರ್ಕ: ಶೇಖರಗೌಡ ಮಾಲಿಪಾಟೀಲ : 99728 21022 ಮತ್ತು 94481 36022

Join Whatsapp