ಖಾಸಗಿ ಶಾಲೆಗಳ ಲಾಬಿ ವಿರುದ್ದ ಕ್ರಮ ಕೈಗೊಳ್ಳಲು ಎಸ್ ಡಿ ಪಿ ಐ ಒತ್ತಾಯ

Prasthutha|

ಬಿಜಾಪುರ : ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಮಾಲಿಕರ ವಿದ್ಯಾರ್ಥಿ ವಿರೋಧಿ ನೀತಿಗಳಿಗೆ ಮಣಿಯಬಾರದು. ಶುಲ್ಕ ಪಾವತಿ ಹೆಸರಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಿರಾಕರಿಸಲಾಗುತ್ತಿದೆ. ಈ ಸಂಬಂಧ ಶಾಲಾ ಫೀಸನ್ನು ಕಟ್ಟಬೇಕೆಂದು ವಿದ್ಯಾರ್ಥಿಗಳಿಗೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದ್ದು, ಸರಕಾರ ಸದಾ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು. ರಾಜ್ಯ ಸರ್ಕಾರ ಕೂಡಲೇ ಖಾಸಗಿ ಶಾಲೆಗಳ ಸಿಬ್ಬಂದಿಗಳಿಗೆ ಕನಿಷ್ಠ 30 ಸಾವಿರ ಕೋವಿಡ್ ಪರಿಹಾರ ಧನ ನೀಡಬೇಕು. ಆಡಳಿತ ಸಮಿತಿಗಳ ಒತ್ತಡಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು ಎಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

- Advertisement -

ರಾಷ್ಟೀಯ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿರವರ ಸಾವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, 84 ವರ್ಷದ ಹೋರಾಟಗಾರನ ಮೇಲೆ ಸುಳ್ಳು ಕೇಸುಗಳನ್ನು ಹೊರಿಸಿ ಜೈಲಿನಲ್ಲಿ ಕೂಡಿಹಾಕಿ ನಿರಂತರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರೂ ಜಾಮೀನು ನಿರಾಕರಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇವರಂತೆ ಸಾವಿರಾರು ನಿರಪರಾಧಿ ಸಾಮಾಜಿಕ ಹೋರಾಟಗಾರರನ್ನು ಸುಳ್ಳು ಕೇಸುಗಳನ್ನು ಹಾಕಿ ಜಾಮೀನು ರಹಿತವಾದ ಕರಾಳ ಕಾನೂನಿನಡಿ ಬಂಧಿಸಲಾಗುತ್ತಿದೆ. ಸರಕಾರ ಕೂಡಲೇ ಇಂತಹ ನಿರಪರಾಧಿ ಪ್ರಗತಿಪರ, ಎಡ, ದಲಿತ, ಮುಸ್ಲಿಂ ಮತ್ತು ವಿದ್ಯಾರ್ಥಿ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಂ ಹಸನ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ಮೇಲೆ ಅಪಾರ ಪ್ರಮಾಣದ ತೆರಿಗೆ ಹಾಕುತ್ತಿರುವುದು ಬೆಲೆ ಏರಿಕೆಗೆ ನೇರ ಕಾರಣವಾಗಿದೆ. ಕೋವಿಡ್ ಲಾಕ್‌ಡೌನ್‌ನಿಂದ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರ ಈ ಸಮಯದಲ್ಲಿ ಜನಸಮಾನ್ಯರ ಸಹಾಯಕ್ಕೆ ಧಾವಿಸಬೇಕೆ ಹೊರತು ಅವರ ಮೇಲೆ ತರಿಗೆಯ ಹೊರೆ ಹಾಕುವುದನ್ನು ನಿಲ್ಲಿಸಬೇಕು ಹಾಗೂ ಕೂಡಲೇ ಶೇ.30 ರಷ್ಟು ತರಿಗೆಯನ್ನು ಕಡಿತಗೊಳಿಸಬೇಕು ಎಂದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಬಿಜಾಪುರ ಜಿಲ್ಲಾ ಮುಖಂಡರುಗಳಾದ ಶಫೀಕ್ ಕಣ್ಣೂರ್ ಹಾಗೂ ಇಸಾಕ್ ಸಯ್ಯದ್ ಉಪಸ್ಥಿತರಿದ್ದರು.

Join Whatsapp