ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯನಿಂದ ಮಹಿಳೆಗೆ ಲೈಂಗಿಕ ಕಿರುಕುಳ| ಉನ್ನತ ಮಟ್ಟದ ತನಿಖೆಗೆ SDPI ಆಗ್ರಹ

Prasthutha|

ಮಂಗಳೂರು: ಕೆಲವು ದಿನಗಳಿಂದ ಬೆಳಕಿಗೆ ಬಂದು ಚರ್ಚೆಗೆ ಒಳಗಾಗಿರುವ ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರದ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಬಿ.ಜೆ.ಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಬಾಬು ಶೆಟ್ಟಿಯು ಬಡ ಮಹಿಳೆಯ ಮೇಲೆ ನಡೆಸಿದ ಲೈಂಗಿಕ ಕಿರುಕುಳ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮುನ್ನೂರು ಬ್ಲಾಕ್ ಸಮಿತಿ ಆಗ್ರಹಿಸಿದೆ.

- Advertisement -

ಮುನ್ನೂರು ಗ್ರಾಮ ಪಂಚಾಯತ್ ಗೆ ನಿವೇಶನ ಅಪೇಕ್ಷಿಸಿ ಬಂದ ಮಹಿಳೆಯನ್ನು ಪಂಚಾಯತ್ ಸದಸ್ಯ ನೇರ ಪಂಚಾಯತ್ ಅಧ್ಯಕ್ಷರ ಕೊಠಡಿಗೆ ಕರೆದು ಲೈಂಗಿಕ ಕಿರುಕುಳ ನಡೆಸಿರುವುದು ನಾಚಿಕೆಗೇಡಿನ ಸಂಗತಿ, ಈ ಬಗ್ಗೆ ಬೆದರಿಕೆಗೆ ಒಳಗಾದ ಮಹಿಳೆ ಕೊನೆಗೂ ಪೋಲಿಸರ ಮತ್ತು ಮಾಧ್ಯಮದವರ ಗಮನಕ್ಕೆ ತಂದಿದ್ದು ಈಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ತಮ್ಮ ಪಂಚಾಯತಿಯಲ್ಲಿ ನಡೆದಿದ್ದರೂ ಕಾಂಗ್ರೆಸ್ ಮತ್ತು ಸಿ.ಪಿ.ಐ(ಎಂ) ಬೆಂಬಲಿತ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಸಭೆ ಸೇರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವುದು ದುರಂತ ಎಂದು ಆರೋಪಿಸಿದೆ.

ಕೊನೆಗೂ ಸಾರ್ವಜನಿಕ ಸ್ಪಂದನೆಯಿಂದ ಬೆಳಕಿಗೆ ಬಂದು ಮುನ್ನೂರು ಪಂಚಾಯತ್ ನ ಘನತೆಗೆ ಧಕ್ಕೆ ತಂದು, ಪಂಚಾಯಿತಿಯ ಕಛೇರಿಯನ್ನೇ ತನ್ನ ನೀಚ ವರ್ತನೆಗೆ ಬಳಸಿದ ಬಾಬು ಶೆಟ್ಟಿಯ ಪಂಚಾಯತ್ ಸದಸ್ಯತನವನ್ನು ತಕ್ಷಣ ರದ್ದುಪಡಿಸಬೇಕು, ತನ್ನ ಕೊಠಡಿಯನ್ನೇ ಕೃತ್ಯಕ್ಕೆ ಬಳಸಿದ್ದು ತನ್ನ ಕಣ್ಣೆದುರೇ ನಡೆದಿದ್ದರೂ ಗ್ರಾಮಾಡಳಿತಕ್ಕೆ ಮಾಹಿತಿ ನೀಡದೆ ಮುಚ್ಚಿ ಹಾಕಲು ಪ್ರಯತ್ನಿಸಿದ ಗ್ರಾಮ ಪಂಚಾಯತಿಯ ಅಧ್ಯಕ್ಷರು ತನ್ನ ಹುದ್ದೆಗೆ ರಾಜಿನಾಮೆ ನೀಡಬೇಕು ಮತ್ತು ಕೊಠಡಿಯಲ್ಲಿ ದಾಖಲಾದ ಸಿಸಿಟಿವಿ ದೃಶ್ಯಾವಳಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಗ್ರಾಮದ ಸಂಸತ್ತಿನ ಪಾವಿತ್ರ್ಯತೆಯನ್ನು ರಕ್ಷಿಸಲು ವಿಫಲವಾಗಿ ಕರ್ತವ್ಯ ಲೋಪವೆಸಗಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ( ಪಿ.ಡಿ.ಒ) ಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು ಪಕ್ಷವು ನ್ಯಾಯದ ಪರ ನಿಂತು ಸಂತ್ರಸ್ತೆಯ ಪರ ಧ್ವನಿ ಎತ್ತಲಿದೆ. ಈ ಬೆಳವಣಿಗೆಯ ಬಗ್ಗೆ ಜಿಲ್ಲಾ ಪಂಚಾಯತಿಯ ಕಾರ್ಯ ನಿರ್ವಹಣಾ ಅಧಿಕಾರಿಗೆ ಮಾಹಿತಿ ನೀಡಿದ್ದು ಸ್ಪಂದಿಸುವ ಭರವಸೆ ಇದೆ ಎಂದು ಸಮಿತಿಯ ಅಧ್ಯಕ್ಷರಾದ ಝೈನುದ್ದೀನ್ ಹರೇಕಳ ತಿಳಿಸಿದ್ದಾರೆ.

Join Whatsapp