Home ಕರಾವಳಿ NIAಯ ದಾಳಿಯನ್ನು ಖಂಡಿಸಿ ಬಿ.ಸಿ.ರೋಡ್ ನಲ್ಲಿ ಎಸ್ ಡಿ ಪಿ ಐ ಪ್ರತಿಭಟನೆ

NIAಯ ದಾಳಿಯನ್ನು ಖಂಡಿಸಿ ಬಿ.ಸಿ.ರೋಡ್ ನಲ್ಲಿ ಎಸ್ ಡಿ ಪಿ ಐ ಪ್ರತಿಭಟನೆ

ಬಂಟ್ವಾಳ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಸ್ ಡಿ ಪಿ ಐ ಜಿಲ್ಲಾ ಕಚೇರಿಗೆ ನಡೆಸಿದ ಅತಿಕ್ರಮಣದ ದಾಳಿಯನ್ನು ಹಾಗೂ ಪಾಪ್ಯುಲರ್ ಫ್ರಂಟ್ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ಇಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಬಿ ಸಿ ರೋಡಿನ ಕೈಕಂಬದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.

ಪ್ರತಿಭಟನೆಯ ನೇತೃತ್ವ ವಹಿಸಿದ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೂನಿಶ್ ಅಲಿ ಮಾತನಾಡಿ, “ಗಾಂಧಿಯ ಹತ್ಯೆ, ಬಾಬರೀ ಮಸ್ಜಿದ್ ಧ್ವಂಸ ಮತ್ತು ಗುಜರಾತ್ , ಭಾಗಲ್ ಪುರ ಹತ್ಯಾಕಾಂಡಗಳಂತಹ ಭಯೋತ್ಪಾದಕ ಕೃತ್ಯಗಳ ಇತಿಹಾಸಗಳಿರುವ ಆರೆಸ್ಸೆಸ್ ಮತ್ತು ಸಂಘಪರಿವಾರದ ಮೇಲೆ ದಾಳಿ ಮಾಡಬೇಕಿದ್ದ NIA ಗೆ ದಾಳಿ ಮಾಡುವ ದಾರಿ ತಪ್ಪಿದೆ. ನಿಮಗೆ ಪಿ ಎಫ್ ಐ ಎಂಬ ಸಾಮಾಜಿಕ ಸಂಘಟನೆಯನ್ನು ದಮನಿಸಲು ಅಸಾಧ್ಯ. ಯಾಕೆಂದರೆ ನೀವು ನೂರು ವರ್ಷ ಮಾಡಿದ ಕಾರ್ಯವನ್ನು ಪಿ ಎಫ್ ಐ ಬರೀ ಇಪ್ಪತ್ತೈದು ವರ್ಷಗಳಲ್ಲಿ ಮಾಡಿ ಮುಗಿಸಿದೆ. ಇಡೀ ದೇಶಾದ್ಯಂತ ದೇಶ ರಕ್ಷಣೆಯ ಆಶಯ – ಸಿದ್ಧಾಂತಗಳನ್ನು ಜನರಿಗೆ ಪಿ ಎಫ್ ಐ ಮನವರಿಕೆ ಮಾಡಿ ಕೊಟ್ಟಿದೆ. ಕನಿಷ್ಠ ಪಕ್ಷ ಆರೆಸ್ಸೆಸ್ಸನ್ನು ವಿರೋಧಿಸುವ ಚಿತ್ತವನ್ನು ಜನರಿಗೆ ಪಿ ಎಫ್ ಐ ತಿಳಿಸಿಕೊಟ್ಟಿದೆ” ಎಂದು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮುಖ್ಯ ಪ್ರಭಾಷಣಗೈದ ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ” NIA ಮತ್ತು ಬಿಜೆಪಿ ಸರಕಾರವು ಸಾಮಾಜಿಕ ಸಂಘಟನೆಯಾದ ಪಿ ಎಫ್ ಐ ಯ ನಾಯಕರನ್ನು ಬಂಧಿಸಿದಾಕ್ಷಣ ನಾಯಕರಾರೂ ಇಲ್ಲ ಎಂಬ ತಿರುಕನ ಕನಸು ಕಂಡಿರಬಹುದು. ಆದರೆ ಪಿ ಎಫ್ ಐ ಯ ಪ್ರತಿಯೊಂದು ಸದಸ್ಯರೂ ಕೂಡ ನಾಯಕರೆಂಬ ನಿಜಾಂಶವನ್ನು ಬಿಜೆಪಿ ತಿಳಿದುಕೊಳ್ಳಬೇಕು. ಪಿ ಎಫ್ ಐ ಯ ಆಳ ಮತ್ತು ಅಗಲ ದೇಶವಿಡೀ ವಿಸ್ತರಿಸಿವೆ. ಪಿ ಎಫ್ ಐ ಯನ್ನು ಸೈದ್ಧಾಂತಿಕವಾಗಿ ಎದುರಿಸಲು ವಿಫಲಗೊಂಡ ಆರೆಸ್ಸೆಸ್ ಮತ್ತು ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ದಾಳಿಗಳನ್ನು ಮಾಡುವ ಮೂಲಕ ಬೆದರಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನ ವಿಫಲ ಪ್ರಯತ್ನವಾಗಿದೆ. ನಿಮಗೆ ಪಿ ಎಫ್ ಐ ಯ ಭಯವಿದೆ ಎಂಬುವುದು ಈ ದಾಳಿಯ ಮೂಲಕ ಬಹಿರಂಗವಾಗಿ ಗೋಚರವಾಗುತ್ತಿದೆ. ಇದು ನಿಮ್ಮ ತಾತ್ಕಾಲಿಕ ಗೆಲುವು ” ಎಂದು ಬಿಜೆಪಿಯ ವಿರುದ್ಧ ಕಿಡಿಕಾರಿದರು.

ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು ಮಾತನಾಡಿ ” ಒಂದು ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗುತ್ತಿರುವ ರಾಜಕೀಯ ಪಕ್ಷವಾಗಿ ಎಸ್ ಡಿ ಪಿ ಐ ಯು, ಸಂವಿಧಾನಾತ್ಮಕ ನಿಲುವಿನಲ್ಲಿ ಕಾರ್ಯಾಚರಿಸುತ್ತಿರುವ ಪಿ ಎಫ್ ಐ ಸಂಘಟನೆಯ ಜೊತೆ ಸದಾ ನಿಲ್ಲಲಿದೆ. ಮಾನವ ಸೇವೆಗಳಲ್ಲಿ ಸದಾ ನಿರತವಾಗುತ್ತಿದ್ದ ಪಿ ಎಫ್ ಐ ಮತ್ತು ನೊಂದಾಯಿತ ರಾಜಕೀಯ ಪಕ್ಷ ಎಸ್ ಡಿ ಪಿ ಐ ಕಛೇರಿ ಮೇಲೆ ದಾಳಿ ಮಾಡಿರುವುದು ಹೇಡಿತನಕ್ಕೆ ಸಾಕ್ಷಿ” ಎಂದು ವ್ಯಂಗ್ಯ ಮಾಡಿದರು.

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ದ.ಕ ಜಿಲ್ಲಾ ಸದಸ್ಯರುಗಳಾದ ಶಾಹುಲ್ ಎಸ್ ಎಚ್ , ಯೂಸುಫ್ ಆಲಡ್ಕ , ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಹಾಗೂ ಪುರಸಭಾ ಸದಸ್ಯರಾದ ಇದ್ರೀಸ್ ಪಿ ಜೆ ಮತ್ತು ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.
ಅಶ್ರಫ್ ತಲಪಾಡಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ವಂದನೆಗೈದರು. ಘೋಷಣೆಗಳ ಮೂಲಕ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version