Home ಟಾಪ್ ಸುದ್ದಿಗಳು ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ನಿಂದ “ಸೇ ನೋ ಟು ಡ್ರಗ್ಸ್” ಮಾದಕ ವಿರೋಧಿ ಅಭಿಯಾನ

ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ನಿಂದ “ಸೇ ನೋ ಟು ಡ್ರಗ್ಸ್” ಮಾದಕ ವಿರೋಧಿ ಅಭಿಯಾನ

ಬೆಂಗಳೂರು: ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಕರ್ನಾಟಕ ರಾಜ್ಯ ಘಟಕವು ಅಕ್ಟೋಬರ್ 10 ರಿಂದ ನವೆಂಬರ್ 10 ರವರೆಗೆ ‘ಸೇ ನೋ ಟು ಡ್ರಗ್ಸ್’ ಮಾದಕ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪೀಳಿಗೆ ದಿನೇ ದಿನೇ ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದು ಅದರಲ್ಲೂ ವಿದ್ಯಾರ್ಥಿಗಳು ಈ ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಹಾಗೂ ಇದನ್ನು ಬಳಸಿಕೊಂಡ ಮಾದಕ ದ್ರವ್ಯ ಸಾಗಾಣಿದಾರರು ಕಳ್ಳಸಾಗಣೆ ಮಾಡಿ ದೇಶದ ಯುವಶಕ್ತಿಗೆ ಮಾರಕವಾಗುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿರುತ್ತದೆ ಎಂದರು.


ರಾಜ್ಯ ಗೃಹ ಇಲಾಖೆಗಳ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 16 ಡ್ರಗ್ ಪ್ರಕರಣಗಳು ಕಂಡುಬರುತ್ತಿದ್ದು, ಅದರಲ್ಲಿ ಮಾದಕ ವಸ್ತುಗಳ ಸೇವನೆ, ಸ್ವಾಧೀನ ಮತ್ತು ವ್ಯವಹರಗಳ ಪ್ರಕರಣಗಳು ದಾಖಲಾಗುತ್ತಿವೆ. ದೇಶದ ವಿವಿಧ ನಗರಗಳ 16 ರಿಂದ 20 ವರ್ಷದ ಸಾವಿರ ಯುವಕರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಶೇ. 47 ಜನರು ಸಿಗರೇಟು ಸೇವಿಸುವುದಾಗಿದ್ದು, ಶೇ. 20 ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ. ಅದರಲ್ಲಿ ಶೇ 83 ಯುವಕರಿಗೆ ಈ ಚಟದಿಂದ ಹೇಗೆ ಹೊರಬರಬೇಕೆಂದು ತಿಳಿದಿಲ್ಲ. ಇದು ಇಂದಿನ ಯುವಕರು ಅನುಭವಿಸುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದ್ದು, ಸಾಮಾಜಿಕ ಪಿಡುಗುಗಾಗಿ ಪರಿಣಮಿಸಿದೆ. ಈ ಮಾದಕ ವಸ್ತುವಿನ ಜಾಲವು ರಾಜಾರೋಷವಾಗಿ ನಮ್ಮ ಮಧ್ಯೆ ವ್ಯಾಪಿಸಿರುವುದು ದುರಂತವಾಗಿದೆ ಎಂದು ಹೇಳಿದರು.


ಸರಕಾರ, ಸಂಘ ಸಂಸ್ಥೆಗಳು, ಸಾರ್ವಜನಿಕರು ಒಂದಾಗಿ ಇದರ ವಿರುದ್ಧ ಸಮರ ಸಾರಬೇಕು. ವಿದ್ಯಾವಂತ ಸಮೂಹವೇ ಅತಿ ಹೆಚ್ಚು ಮಾದಕ ವ್ಯಸನಿಗಳಾಗುತ್ತಿರುವುದು ಕಳವಳಕಾರಿ. ಇಂತಹ ಪ್ರಕರಣಗಳು ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ಅನೇಕ ಕಡೆಗಳಲ್ಲಿ ಹರಡಿದೆ. ಯುವಕರು ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಕರ್ನಾಟಕ ರಾಜ್ಯ ಘಟಕವು ಅಕ್ಟೋಬರ್ 10 ರಿಂದ ನವೆಂಬರ್ 10 ರವರೆಗೆ ‘ಸೇ ನೋ ಟು ಡ್ರಗ್ಸ್’ ಮಾದಕ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಪ್ರಯುಕ್ತ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯಾದ್ಯಾಂತ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ, ಶಾಲಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ, ಸಾಮಾಜಿಕ ಜಾಲಾತಾಣದ ಮೂಲಕ ಜಾಗೃತಿ, ಸಂಘ ಸಂಸ್ಥೆಗಳ ಸಹಕಾರಗಳೊಂದಿಗೆ ಈ ಕುರಿತು ಸಂವಾದ, ಜಾಗೃತಿ ಜಾಥ, ಪೋಷಕರಿಗೆ ಕಾರ್ಯಗಾರ, ಶಿಕ್ಷಕರ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ಉಪನ್ಯಾಸ, ಭಿತ್ತಿ ಪತ್ರ ವಿತರಣೆ ಇಂತಹ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.


ಸಾಲಿಡಾರಿಟಿ ಇದೇ ಡಿಸೆಂಬರ್ 18ರಂದು “ಭರವಸೆ-ಮರುನಿರ್ಮಾಣ-ಘನತೆ” ಎಂಬ ಧ್ಯೇಯವಾಕ್ಯದಡಿ ರಾಜ್ಯಮಟ್ಟದ ಯುವ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ವಿವಿಧ ಸಾಮಾಜಿಕ, ಸಾಂಸ್ಕçತಿಕ ಕಾರ್ಯಕ್ರಮಗಳು ನಾಡಿನಾದ್ಯಂತ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೆಹಾನ್, , ಅಭಿಯಾನ ಸಂಚಾಲಕ ಮುಹಮ್ಮದ್ ಅಖಿಲ್, ಸಾಲಿಡಾರಿಟಿ ಸ್ಪೋರ್ಟ್ಸ್ ಆಂಡ್ ಫಿಟ್ ನೆಸ್ ಅಕಾಡಮಿ ಸಂಚಾಲಕ ಇಮ್ತಿಯಾಝ್ ಬೇಗ್, ಮಾಧ್ಯಮ ಉಸ್ತುವಾರಿ ಮುಹಮ್ಮದ್ ನವಾಝ್ ಹೇಳಿದರು.

Join Whatsapp
Exit mobile version