ಸಯ್ಯದ್ ಸಲಾಹುದ್ದೀನ್ ಹತ್ಯೆ । RSS ನ ಮೂವರು ಕಾರ್ಯಕರ್ತರ ಬಂಧನ

Prasthutha|

ಕಣ್ಣೂರು: ಸೆಪ್ಟಂಬರ್ 8ರ ಸಂಜೆ ಕೇರಳದ ಕಣ್ಣೂರು ಜಿಲ್ಲೆಯ ಚಿತ್ತಾರಿಪ್ಪರಂಬ್ ಎಂಬಲ್ಲಿ ಹತ್ಯೆಯಾದ SDPI ಕಾರ್ಯಕರ್ತ ಸಯ್ಯದ್ ಸಲಾಹುದ್ದೀನ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದವರೆನ್ನಲಾದ ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಳಸಿದ್ದ ರಿಟ್ಝ್ ಕಾರೊಂದನ್ನು ಕೂಡಾ ವಶಕ್ಕೆ ಪಡೆಯಲಾಗಿದೆ ಎಂದು ಕೇರಳದ ‘ತೇಜಸ್ ನ್ಯೂಸ್’ ವರದಿ ಮಾಡಿದೆ. ಈ ಆರೋಪಿಗಳು ಹಲವಾರು ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳ ಆರೋಪಿಗಳು ಎನ್ನಲಾಗಿದೆ.
ಸಲಾಹುದ್ದೀನ್ ತನ್ನ ಸಹೋದರಿಯರಿಬ್ಬರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂಬದಿಯಿಂದ ಕಾರಿಗೆ ಢಿಕ್ಕಿ ಹೊಡೆದಿತ್ತು. ಅದನ್ನು ವಿಚಾರಿಸಲು ಕೆಳಗಿಳಿದ ಸಲಾಹುದ್ದೀನ್ ಮೇಲೆ ಮತ್ತೊಂದು ಬೈಕಿನಲ್ಲಿ ಬಂದಿದ್ದ ಕೊಲೆಗಡುಕರು ಮಚ್ಚುಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು.
ಈ ಕೊಲೆ ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು ನಡೆಸಿದ್ದೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಕಾರಿನಿಂದ ಕೆಳಗಿಳಿದ ಸಲಾಹುದ್ದೀನ್ ರ ಮೇಲೆ ಮತ್ತೊಂದು ತಂಡ ಯದ್ವಾ ತದ್ವಾ ಮಚ್ಚು ಬೀಸಿದೆ. ಇಷ್ಟಕ್ಕೇ ತೃಪ್ತರಾಗದ ಕೊಲೆಗಡುಕರ ತಂಡ ಅವರನ್ನು ಪಕ್ಕದ ಪೊದೆಗಳಿಗೆ ಎಳೆದುಕೊಂಡು ಹೋಗಿ ಅವರ ಮೇಲೆ ಮಚ್ಚು ಬೀಸಿದೆ. ತಡೆಯಲು ಬಂದ ಅವರ ಸಹೋದರಿಯರ ಮೇಲೂ ಈ ತಂಡ ದಾಳಿ ಮಾಡಿ ಗಾಯಗೊಳಿಸಿದ್ದು, ಮನುಷ್ಯತ್ವವಿಲ್ಲದ ಈ ಕೊಲೆಗಡುಕ ಸಂಘದ ಅಮಾನವೀಯತೆಗೆ ಸಾಕ್ಷಿಯಾಗಿದೆ.

Join Whatsapp