ಭಾರತವನ್ನು ಫ್ಯಾಶಿಸ್ಟ್ ದೇಶವನ್ನಾಗಿ ಮಾಡಲು ಆರೆಸ್ಸೆಸ್ ಪ್ರಯತ್ನ : ಕ್ಯಾಂಪಸ್ ಫ್ರಂಟ್

Prasthutha|

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಸರಕಾರದ ದಾಳಿಯ ವಿರುದ್ಧ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಭಿಯಾನ

- Advertisement -

ಬೆಂಗಳೂರು: ದೇಶದಲ್ಲಿಂದು ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ವಿಪಕ್ಷಗಳಿಲ್ಲದ ದೇಶವನ್ನು ಎದುರು ನೋಡುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ಫಾನ್ ಸಾದಿಕ್ ಆರೋಪಿಸಿದ್ದಾರೆ.

ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ಮಂಗಳವಾರ “ಅಘೋಷಿತ ತುರ್ತು ಪರಿಸ್ಥಿತಿ; ಸ್ವಾತಂತ್ರ್ಯ ಭ್ರಾತೃತ್ವ ಸಮಾನತೆಗಾಗಿ ವಿದ್ಯಾರ್ಥಿಗಳು” ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಅಭಿಯಾನದ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

- Advertisement -

ಸರಕಾರವನ್ನು ವಿಮರ್ಶಿಸುವ ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು ಮತ್ತು ಪತ್ರಕರ್ತರನ್ನು ಜೈಲಿಗೆ ತಳ್ಳುವ ಮೂಲಕ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಸರಕಾರ ಮಾಡುತ್ತಿದೆ. ಈ ಮೂಲಕ ಬಿಜೆಪಿ ಸರಕಾರವು ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.

ಆರೆಸ್ಸೆಸ್ ಈ ದೇಶವನ್ನು ಅರಾಜಕತೆಯತ್ತ ತಳ್ಳುತ್ತಿದೆ.  ಸರಕಾರದ ವಿರುದ್ಧ ಮಾತನಾಡುವವರನ್ನು ದಮನ ಮಾಡಲಾಗುತ್ತಿದೆ. ಫ್ಯಾಸಿಸ್ಟ್ ದೇಶವನ್ನಾಗಿ ಮಾಡಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ಸ್ವದಕತ್ ಶಾಹ್ ಆರೋಪಿಸಿದ್ದಾರೆ.

ಬಿಜೆಪಿಯನ್ನು ಆರೆಸ್ಸೆಸ್ ಪರದೆಯ ಹಿಂದೆ ನಿಯಂತ್ರಿಸುತ್ತಿದೆ.‌ ಅಘೋಷಿತ ತುರ್ತು ಪರಿಸ್ಥಿತಿ, ಅಸಂವಿಧಾನಿಕತೆ ಮತ್ತು ಹಿಂದುತ್ವ ಪ್ಯಾಶಿಸಂನ‌ ಸೂಚನೆಗಳು ಪ್ರಸ್ತುತ ಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗಾಗಿ ಸರ್ವಾಧಿಕಾರಿಯೊಂದಿಗೆ ರಾಜಿ ಮಾಡಿಕೊಳ್ಳಲು ನಾವು ತಯಾರಿಲ್ಲ. ವಿದ್ಯಾರ್ಥಿ ಹೋರಾಟ ಮಾತ್ರವೇ ನಮ್ಮ ದೇಶ ಮತ್ತು ಸಂವಿಧಾನವನ್ನು ಹಿಂದುತ್ವ ದಾಳಿಯಿಂದ ರಕ್ಷಿಸಬಲ್ಲದು ಎಂಬುವುದಕ್ಕೆ ಭಾರತೀಯ ಇತಿಹಾಸ ಸಾಕ್ಷಿಯಾಗಿದೆ. ಹಾಗಾಗಿ ಕ್ಯಾಂಪಸ್ ಫ್ರಂಟ್ ಅಘೋಷಿತ ತುರ್ತು ಪರಿಸ್ಥಿತಿ; ಸ್ವಾತಂತ್ರ್ಯ ಭ್ರಾತೃತ್ವ ಸಮಾನತೆಗಾಗಿ ವಿದ್ಯಾರ್ಥಿಗಳು” ಎಂಬ ಘೊಷಣೆಯೊಂದಿಗೆ ಜೂನ್ 25ರಿಂದ ಜುಲೈ 02 ರ ವರೆಗೆ ಅಭಿಯಾನವನ್ನು ಕೈಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ, ಸಮಿತಿ ಸದಸ್ಯ ಝುಬೇರ್ ಬೆಂಗಳೂರು ಉಪಸ್ಥಿತರಿದ್ದರು.

Join Whatsapp