Home ಮಲೆನಾಡು ರಾಜಣ್ಣ ದೇವೇಗೌಡ ಕಾಲಿನ ಧೂಳಿಗೂ ಸಮನಲ್ಲ: ಸಂಸದ ಪ್ರಜ್ವಲ್

ರಾಜಣ್ಣ ದೇವೇಗೌಡ ಕಾಲಿನ ಧೂಳಿಗೂ ಸಮನಲ್ಲ: ಸಂಸದ ಪ್ರಜ್ವಲ್

ಹಾಸನ: ಮಾಜಿ ಪ್ರಧಾನಿ ಎಚ್‍.ಡಿ.ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಶಾಸಕ ಕೆ.ಎನ್‍.ರಾಜಣ್ಣ ದೇವೇಗೌಡರ ಕಾಲಿನ ಧೂಳಿಗೂ ಸಮವಲ್ಲ ಎಂದು ಸಂಸದ ಪ್ರಜ್ವಲ್‍ ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಇರುವವರಿಗೆ ಒಂದು ಮಿತಿ ಇದೆ. ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ರಾಜಣ್ಣ ನಾಲಾಯಕ್. ಅಂಥವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಇಂತಹ ಹುಚ್ಚಾಟಕ್ಕೆ ಜನ ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ. ಅವನೊಬ್ಬ ದೊಡ್ಡ ಕಳ್ಳ ಎನ್ನುವುದು ಜನರಿಗೆ ಗೊತ್ತಿದೆ.  ಕೆ.ಎನ್.ರಾಜಣ್ಣ ಇದೇ ರೀತಿ ಹುಚ್ಚಾಟದ ಹೇಳಿಕೆ ನೀಡಿದರೆ, ಜನರು ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.  

ಹೊಲಸು ಬಾಯಿ: ಬಾಲಕೃಷ್ಣ

ರಾಜಣ್ಣ ತಮ್ಮ ಹೊಲಸು ಬಾಯಿಂದ ಮಾಡಿಕೊಂಡಿರುವ ಭೇದಿಗೆ ಪ್ರತಿಕ್ರಿಯಿಸಬಾರದು ಎಂದು ಶ್ರವಣಬೆಳಗೊಳ ಶಾಸಕ ಎಚ್‍.ಸಿ.ಬಾಲಕೃಷ್ಣ ಹೇಳಿದರು. ದೇವೇಗೌಡರನ್ನು ಈಗ ಇಬ್ಬರು ಕೈಹಿಡಿದುಕೊಂಡು ಕರೆದುಕೊಂಡು ಹೋಗುತ್ತಿದ್ದಾರೆ. ಇನ್ನು ನಾಲ್ವರು ಹೊತ್ತುಕೊಂಡು ಹೋಗುವುದು ಬಾಕಿ ಇದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ದೇವೇಗೌಡರ ವ್ಯಕ್ತಿತ್ವ ಎಂತದ್ದು ಎಂದು ಇಡೀ ದೇಶಕ್ಕೆ ಗೊತ್ತಿದೆ. ಯಾರದೋ ಚಿತಾವಣೆಗೆ, ಯಾರನ್ನೋ ಮೆಚ್ಚಿಸಲು ರಾಜಣ್ಣ ಇಂತಹ ಮಾತುಗಳನ್ನಾಡಿದ್ದಾರೆ. ಅಸ್ತಿತ್ವಕ್ಕೋಸ್ಕರ ಪರದಾಡುತ್ತಿರುವ ರಾಜಣ್ಣ ದೇವೇಗೌಡರ ಟೀಕೆ ಮಾಡಿದರೆ ಅವರ ಪಕ್ಷದಲ್ಲಿ ಏನಾದರೂ ಗಿಟ್ಟಿಸಬಹುದು ಎಂದು ಆ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಕೆಲಸ ಮಾಡಿದ ಅವರು, ಇಂತಹ ಹೇಳಿಕೆ ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇದು ಅವರ ಪಕ್ಷದ ಕೆಲ ನಾಯಕರ ಆಸೆಯೂ ಇರಬಹುದು ಎಂದರು.

Join Whatsapp
Exit mobile version