Home ಟಾಪ್ ಸುದ್ದಿಗಳು SDTU ಕಾರ್ಯಕರ್ತರನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡಿರುವುದು ಖಂಡನೀಯ: ಖಾದರ್ ಫರಂಗಿಪೇಟೆ

SDTU ಕಾರ್ಯಕರ್ತರನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡಿರುವುದು ಖಂಡನೀಯ: ಖಾದರ್ ಫರಂಗಿಪೇಟೆ

‘ನಾಲಾಯಕರನ್ನು ಹೊರಗಿಟ್ಟು ಬೀದಿ ವ್ಯಾಪಾರಸ್ಥರಿಗೆ ನ್ಯಾಯ ಕೊಡಿಸಲು SDTU ಬದ್ಧ’


ಮಂಗಳೂರು: SDTU ಕಾರ್ಯಕರ್ತರನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡಿರುವುದು ಖಂಡನೀಯ ಎಂದು SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ತಿಳಿಸಿದ್ದಾರೆ.


ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘ(ರಿ) ಮಂಗಳೂರು ಇದರ ವತಿಯಿಂದ ಬುಧವಾರ ಮಂಗಳೂರು ಮಹಾನಗರ ಪಾಲಿಕೆ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ ನಡೆಸುವುದನ್ನು ಹಾಗೂ ವಿವಿಧ ಬೇಡಿಕೆಗಳನ್ನು ಇರಿಸಿ ನಗರ ಪಾಲಿಕೆ ಕಛೇರಿ ಚಲೋ ಹಾಗೂ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಇದರ ಆಯೋಜಕರು ಕಾರ್ಮಿಕ ಸಂಘಟನೆಯಾದ SDTU ಸಂಘಟನೆಗೆ ಅಧಿಕೃತವಾಗಿ ವಾಟ್ಸಪ್ ವಾಯ್ಸ್ ಮುಖಾಂತರ ಮತ್ತು ಜಿಲ್ಲಾ ನಾಯಕರಿಗೆ ಕರೆ ಮಾಡಿ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಬರುವಂತೆ ಆಹ್ವಾನ ನೀಡಿದ್ದರು. ಪ್ರತಿಭಟನೆಯ ಆಯೋಜಕರ ಮಾತಿಗೆ ಗೌರವ ನೀಡಿ ನಮ್ಮ ಕಾರ್ಯಕರ್ತರು ನಾಯಕರ ಸೂಚನೆಯಂತೆ ಧ್ವಜದೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ CPIM ನಾಯಕರಿಬ್ಬರು ಆಹ್ವಾನಿಸಿ ಬಂದ SDTU ಕಾರ್ಯಕರ್ತರನ್ನು ಸಾರ್ವಜನಿಕವಾಗಿ ತೇಜೋವದೆ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.


CPIM ನ ಮೂಲ ಉದ್ದೇಶ ಬೀದಿಬದಿ ವ್ಯಾಪಾರಸ್ಥರಿಗೆ ನ್ಯಾಯ ದೊರಕಿಸಿ ಕೊಡುವುದಲ್ಲ, ಬದಲಿಗೆ ಪ್ರತಿಭಟನೆಯ ದಿಕ್ಕು ತಪ್ಪಿಸಿ ನ್ಯಾಯಯುತ ಹೋರಾಟದ ಉದ್ದೇಶವನ್ನು ಬುಡಮೇಲುಗೊಳಿಸುವುದು ಎಂಬದು ಸ್ಪಷ್ಟವಾಗಿದೆ ಎಂದರು.


ಮಂಗಳೂರು ಮಹಾನಗರ ಪಾಲಿಕೆಯ ಟೈಗರ್ ಕಾರ್ಯಾಚರಣೆಯ ಸಂದರ್ಭದಲ್ಲೇ SDTU ಸಂಘಟನೆ ಆ ಸ್ಥಳದಲ್ಲೇ ನಿರಂತರವಾಗಿ ಪ್ರತಿಭಟಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ಬೆಂಬಲ ನೀಡಿ ನ್ಯಾಯಕ್ಕಾಗಿ ಆಗ್ರಹಿಸಿತ್ತು. ಅದೇ ರೀತಿ ನಮ್ಮ ಸಂಘಟನೆಗೆ ಪ್ರತಿಭಟನೆಯ ಆಯೋಜಕರಿಂದ ಅಧಿಕೃತ ಆಹ್ವಾನ ಬಂದ ನಂತರ SDTU ಹೆಸರಿನಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪೋಸ್ಟರ್ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿತ್ತು. ಹಾಗಾಗಿ ಈ ಪ್ರತಿಭಟನೆಗೆ SDTU ಕಾರ್ಮಿಕ ಸಂಘಟನೆಯ ನಾಯಕರು ಹಾಗೂ ಕಾರ್ಯಕರ್ತರು ಆಗಮಿಸುತ್ತಾರೆ ಎಂಬುದು ಇದೇ ಸೋಕಾಲ್ಡ್ ನಾಯಕರಿಗೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಸಮಾನ ಮನಸ್ಕ ಸಂಘಟನೆಗಳಿಗೂ ಮೊದಲೇ ತಿಳಿದಿತ್ತು. ಆದರೆ ಆ ಸಂದರ್ಭದಲ್ಲಿ ಪ್ರತಿಭಟನೆಯ ಆಯೋಜಕರಲ್ಲಾಗಲಿ ಅಥವಾ ಸಾಮಾಜಿಕ ಜಾಲತಾಣದಲ್ಲಾಗಲಿ ಅಥವಾ ಅಧಿಕೃತರೊಂದಿಗಾಗಲಿ ಯಾವುದೇ ಆಕ್ಷೇಪಣೆ ಸಲ್ಲಿಸದ ಈ ಸೋಕಾಲ್ಡ್ ನಾಯಕರು ಪ್ರತಿಭಟನೆ ಆರಂಭವಾಗಿ ತಮ್ಮ ಭಾಷಣದ ಸಂದರ್ಭದಲ್ಲಿ ಎಸ್ಡಿಟಿಯುನ ಧ್ವಜವನ್ನು ಕಂಡಾಗ ತನ್ನ ರಾಜಕೀಯ ಕುಬುದ್ದಿಯನ್ನು ತೋರಿಸುವ ಮೂಲಕ ಪ್ರತಿಭಟನೆಯ ಉದ್ದೇಶವನ್ನು ಹಾಳುಗೆಡವಿ ಟೈಗರ್ ಕಾರ್ಯಾಚರಣೆಗೆ ವಿರುದ್ಧ ಇರುವಂತೆ ನಾಟಕ ಮಾಡಿ ಹಿಂಬಾಗಿಲ ಮೂಲಕ ಬಿಜೆಪಿಯ ಪರವಾಗಿ ನಿಂತುಕೊಂಡಿರುವುದು ಸ್ಪಷ್ಟವಾಗಿದೆ. ಡಿವೈಎಫ್ಐನ ಜಿಲ್ಲಾಧ್ಯಕ್ಷ ಇಮ್ತಿಯಾಝ್ರವರಿಗೆ ಎಸ್ಡಿಟಿಯು ಕಾರ್ಮಿಕ ಸಂಘಟನೆಯ ಧ್ವಜ ಕಂಡೊಡನೆ ತನ್ನ ಅಸಹನೆ ಹೊರಹಾಕಿ ಕೇವಲವಾಗಿ ನಡೆದುಕೊಂಡು ಈ ಹಿಂದೆ ಹಲವಾರು ಹೋರಾಟಗಳನ್ನು ಹೈಜಾಕ್ ಮಾಡಿದ ಅದೇ ದಿಕ್ಕಿನಲ್ಲಿ ಈ ಹೋರಾಟವನ್ನೂ ಕೊಂಡೊಯ್ಯುವ ಶೈಲಿಯಲ್ಲಿ ಇದ್ದಾರೆ ಎಂದರು.


ಮೈಕ್ ಸಿಕ್ಕ ತಕ್ಷಣ ಹೋರಾಟಗಾರರ ಸೋಗಿನಲ್ಲಿ ಬಂದು ಸಮಯ ಸಾಧಕನ ಇಂತಹ ನಾಲಾಯಕರನ್ನು ಹೊರಗಿಟ್ಟು ಬೀದಿ ವ್ಯಾಪಾರಸ್ಥರಿಗೆ ನ್ಯಾಯವನ್ನು ಕೊಡಿಸಲು ಎಸ್ ಡಿಟಿಯು ಬದ್ದವಾಗಿದೆ ಎಂದು ಹೇಳಿದ್ದಾರೆ.


SDTU ಮಂಗಳೂರು ದಕ್ಷಿಣ ಸಮಿತಿ ಅಧ್ಯಕ್ಷ ಇಕ್ಬಾಲ್ ಬಿಪಿ, ಉಪಾಧ್ಯಕ್ಷ ಮುಸ್ತಫಾ ಪಾರ್ಲಿಯಾ, ಜೊತೆ ಕಾರ್ಯದರ್ಶಿ ಶೆರೀಫ್ ಉಲೈಬೆಟ್ಟು, SDTU ಮಂಗಳೂರು ನಗರ ಸಮಿತಿ ಸದಸ್ಯ ಇಲ್ಯಾಸ್ ಬೆಂಗರೆ ಉಪಸ್ಥಿತರಿದ್ದರು.

Join Whatsapp
Exit mobile version