Home ಕರಾವಳಿ ಆಸ್ತಿ ವಿವಾದ: ಅಣ್ಣನನ್ನು ಇರಿದು ಕೊಂದ ತಮ್ಮ

ಆಸ್ತಿ ವಿವಾದ: ಅಣ್ಣನನ್ನು ಇರಿದು ಕೊಂದ ತಮ್ಮ

ಮಂಗಳೂರು: ಜಮೀನಿನ ವಿಚಾರದಲ್ಲಿ ಉಂಟಾದ ವೈಷಮ್ಯದಿಂದ ಒಡಹುಟ್ಟಿದ ಅಣ್ಣನನ್ನು ತಮ್ಮ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳ ಬಳಿ ನಡೆದಿದೆ.

ನಿಟ್ಟೆ ಬಜಕಳದ ಶೇಖರ್(50) ಕೊಲೆಯಾದವರು, ಕೃತ್ಯವೆಸಗಿದ ಆತನ ತಮ್ಮ ರಾಜು(35)ನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಅಣ್ಣ ಶೇಖರ್ ಮತ್ತು ತಮ್ಮ ರಾಜು ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದು ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದ. ಅಣ್ಣನೊಂದಿಗೆ ವೈಮನಸ್ಸಿಂದ ರಾಜು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ ವಾಸವಾಗಿದ್ದ.

ಎರಡು ದಿನಗಳ ಹಿಂದೆ ಶೇಖರ ಮನೆಯಲ್ಲಿ ಅಂಗಳದ ಕಾಮಗಾರಿ ನಿರ್ವಹಿಸುತ್ತಿದ್ದು, ಮೂವರು ಕೆಲಸಗಾರರೊಂದಿಗೆ ಜೆಲ್ಲಿಯನ್ನು ಹೊತ್ತು ಮನೆಗೆ ಸಾಗಿಸುತ್ತಿದ್ದ. ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಮನೆಯಲ್ಲಿ ದುರಸ್ತಿ ಕೆಲಸ ನಿರ್ವಹಿಸದಂತೆ ಆಕ್ಷೇಪಿಸಿದ್ದ. ನಂತರ ರಾಜು ಚೂರಿ ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಣ್ಣನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ತೀವ್ರ ರಕ್ತಸ್ರಾವದಿಂದ ಶೇಖರ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿರುವ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Join Whatsapp
Exit mobile version