Home ಟಾಪ್ ಸುದ್ದಿಗಳು ನಿರ್ಮಾಪಕ ಸೌಂದರ್ಯ ಜಗದೀಶ್ ಸಾವು: ಆತ್ಮಹತ್ಯೆ ಅಲ್ಲ ಎಂದ ಕುಟುಂಬ

ನಿರ್ಮಾಪಕ ಸೌಂದರ್ಯ ಜಗದೀಶ್ ಸಾವು: ಆತ್ಮಹತ್ಯೆ ಅಲ್ಲ ಎಂದ ಕುಟುಂಬ

ಬೆಂಗಳೂರು: ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ಮೃತರಾಗಿದ್ದಾರೆ. ಈ ನಡುವೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮನೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದೂ ಸುದ್ದಿ ಹರಿದಾಡುತ್ತಿದೆ.

ಚಿತ್ರ ನಿರ್ಮಾಣದ ಜೊತೆಗೆ ಉದ್ಯಮಿ, ಬಿಲ್ಡರ್‌ ಕೂಡ ಆಗಿರುವ ಸೌಂದರ್ಯ ಜಗದೀಶ್ ಅಪ್ಪು ಮತ್ತು ಪಪ್ಪು, ಮಸ್ತ್ ಮಜಾ ಮಾಡಿ, ರಾಮ್‌ಲೀಲಾ, ಸ್ನೇಹಿತರು ಮತ್ತು ರಾಮಲೀಲಾ ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಅವರ ಪುತ್ರಿ ಸೌಂದರ್ಯ ವಿವಾಹ ನೆರವೇರಿತ್ತು.

ಸೌಂದರ್ಯ ಜಗದೀಶ್ ಆತ್ಮಹತ್ಯೆಯನ್ನು ತಳ್ಳಿಹಾಕಿದ ಅವರ ಕುಟುಂಬ, ಹೃದಯಾಘಾತದಿಂದ ಮೃತರಾಗಿದ್ದಾರೆಂದು ಹೇಳಿದೆಯೆಂದು ವರದಿಯಾಗಿತ್ತು. ಆದರೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹೌದು ಎಂದು ಮೂಲಗಳು ಹೇಳುತ್ತಿವೆ.

ಇತ್ತೀಚೆಗೆ ರಾಜಾಜಿನಗರದಲ್ಲಿರುವ ಅವರ ಒಡೆತನದ ಜೆಟ್ ಲ್ಯಾಗ್ ಪಬ್ ನಲ್ಲಿ ನಟ ದರ್ಶನ್ ನಟನೆಯ ಯಶಸ್ಸು ಕಂಡ ಕಾಟೇರ ಚಿತ್ರತಂಡ ಅವಧಿ ಮೀರಿ ಪಾರ್ಟಿ ನಡೆಸಿ ಪೊಲೀಸರಿಂದ ನೊಟೀಸ್ ಪಡೆದಿತ್ತು. ಇತ್ತೀಚೆಗೆ ಸೌಂದರ್ಯ ಜಗದೀಶ್ ಅವರು ಸಾಕಷ್ಟು ವಿವಾದಗಳಿಗೆ ಸಿಲುಕಿದ್ದರು.

ಪತ್ನಿ ರೇಖಾ ಜಗದೀಶ್, ಮಗ ನಟ ಸ್ನೇಹಿತ್, ಓರ್ವ ಪುತ್ರಿ ಸೇರಿ ಅಪಾರ ಬಂಧು ಬಳಗದವರನ್ನು, ಚಿತ್ರರಂಗದ ಸ್ನೇಹಿತರನ್ನು ಅಗಲಿದ್ದಾರೆ.

Join Whatsapp
Exit mobile version