ಪಾಕ್ ಪರ ಘೋಷಣೆ‌ | ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ SDPIಯಿಂದ ಬೆಳ್ತಂಗಡಿ ಚಲೋ

Prasthutha|

ಮಂಗಳೂರು : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ವೇಳೆ ಬೆಳ್ತಂಗಡಿಯ ಉಜಿರೆ ಮತಕೇಂದ್ರದ ಹೊರಗೆ ವಿವಿಧ ಪಕ್ಷಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಕೆಲವು ಕಿಡಿಗೇಡಿಗಳು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ, ನೈಜ್ಯ ಆರೋಪಿಗಳನ್ನು ಬಂಧಿಸದಿದ್ದಲ್ಲಿ SDPI ‘ಬೆಳ್ತಂಗಡಿ ಚಲೋ’ ಎಂಬ ಬೃಹತ್ ಹೋರಾಟ ಕೈಗೊಳ್ಳಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದ್ದಾರೆ. ಅವರು ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.

- Advertisement -

ಡಿಸೆಂಬರ್‌ 30 ರಂದು  ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ದಿನ ಬೆಳ್ತಂಗಡಿ ತಾಲೂಕಿನ ಉಜಿರೆಯ ಮತ ಎಣಿಕಾ ಕೇಂದ್ರದ ಹೊರಗೆ SDPI ಬೆಂಬಲಿತ ಅಭ್ಯರ್ಥಿಗಳು ಜಯಗೊಳಿಸಿದಾಗ ಸಹಜವಾಗಿ ಕಾರ್ಯಕರ್ತರು SDPI ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಆ ಸಮಯದಲ್ಲಿ ಪೂರ್ವಯೋಜಿತ ಕೃತ್ಯವೆಂಬಂತೆ ‘ದಿಗ್ವಿಜಯ’ ನ್ಯೂಸ್ ಎಂಬ ಕನ್ನಡ ಟಿವಿ ಮಾಧ್ಯಮವೊಂದು SDPI ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿಯೊಂದನ್ನು ಪ್ರಕಟಿಸಿದೆ ಎಂದು ಅವರು ಹೇಳಿದ್ದಾರೆ.

ಆ ಕೂಡಲೇ ನಮ್ಮ ಪಕ್ಷದ ಸ್ಥಳೀಯ ನಾಯಕರು ಬೆಳ್ತಂಗಡಿ ಠಾಣೆಯಲ್ಲಿ ‘ದಿಗ್ವಿಜಯ’ ನ್ಯೂಸ್ ವಿರುದ್ಧ ದೂರು ಕೊಟ್ಟರೂ ದೂರು ದಾಖಲಿಸಲು ನಿರಾಕರಿಸಿದ ಪೋಲಿಸರು, ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ಅಮಾಯಕರಾದ 12 ಮಂದಿ ಕಾರ್ಯಕರ್ತರ ಮನೆಗೆ ನುಗ್ಗಿ ಅವರನ್ನು ಅಮಾನುಷವಾಗಿ ಬಂಧಿಸಿ ಠಾಣೆಯಲ್ಲಿ ಕೂರಿಸಿದ್ದರು.

- Advertisement -

ಈ ಬಗ್ಗೆ ನಮ್ಮ ನಾಯಕರು ಹಾಗೂ ಬಂಧನಕ್ಕೊಳಗಾದ ಯುವಕರ ಮನೆಯವರು ಠಾಣಾಧಿಕಾರಿಗಳು ಹಾಗೂ ಉನ್ನತ ಪೋಲಿಸ್ ಅಧಿಕಾರಿಗಳನ್ನು ವಿಚಾರಿಸಿದಾಗ ನಮಗೆ ಮೇಲಿನಿಂದ ಒತ್ತಡಗಳಿವೆ ನಾವು ಅಸಹಾಯಕರಾಗಿದ್ದೇವೆ ಎಂದರು. ಅದೇ ದಿನ 3 ಮಂದಿಯ ಮೇಲೆ ದೇಶದ್ರೋಹದ ಕೇಸು ದಾಖಲಿಸುವ ಮೂಲಕ ಪೋಲಿಸರು ಅಮಾಯಕ ಯುವಕರನ್ನು ಜೈಲಿಗಟ್ಟಿದರು ಎಂದು ಅವರು ತಿಳಿಸಿದ್ದಾರೆ.

ಅನಂತರ ನಾವು ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ‌ಹಾಗೂ ಜಿಲ್ಲಾದ್ಯಂತ  ಪ್ರತಿಭಟನೆ ನಡೆಸುವ ಮೂಲಕ ಪೋಲಿಸರ ಪಕ್ಷಪಾತ ಧೋರಣೆಯನ್ನು ಬಲವಾಗಿ ಖಂಡಿಸಿದೆವು. ಇದರ ಹಿನ್ನೆಲೆಯಲ್ಲಿ ಬಿಜೆಪಿ ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರ ಅಡಗಿದೆ. ಇದನ್ನು ಪೋಲಿಸರು ಪ್ರಾಮಾಣಿಕವಾಗಿ ತನಿಖೆಯ ಮೂಲಕ ಬಯಲಿಗೆಳೆಯಬೇಕೆಂದು ಒತ್ತಾಯಿಸಿದೆವು ಎಂದು ಅವರು ಹೇಳಿದ್ದಾರೆ.

ಇದಾದ 2 ದಿನಗಳ ನಂತರ ಪಾಕ್ ಪರ ಘೋಷಣೆಯನ್ನು ಕೂಗಿದ್ದು ಬಿಜೆಪಿ ಸಂಘಪರಿವಾರ ಕಾರ್ಯಕರ್ತರ ಗುಂಪು ಎಂದು ವೀಡಿಯೋದ ಮೂಲಕ ಸ್ಪಷ್ಟವಾಗಿ ಬಹಿರಂಗೊಂಡು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದ ಮೂಲಕ ಪ್ರಸಾರವಾಗಿದ್ದು ಇದು ಇಡೀ ಜಿಲ್ಲೆಗೆ ತಿಳಿದಂತಹ ಸತ್ಯ ಘಟಣೆಯಾಗಿದೆ. ಈ ಬಗ್ಗೆ ಪೋಲಿಸ್ ಇಲಾಖೆ ನೈಜ ಆರೋಪಿಗಳ ಮೆಲೆ ಕಾನೂನು ಕ್ರಮ ಕೈಗೊಳ್ಳಲು ನಾವು ದೂರು ನೀಡಿದರೂ ಹಿಂದೇಟು ಹಾಕಿದೆ.

ಆರೋಪಿಗಳು ಬಿಜೆಪಿ ಕಾರ್ಯಕರ್ತರಾದ ಕಾರಣ ಪೊಲೀಸರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸಿ ದ್ವಿಮುಖ ದೋರಣೆಯನ್ನು ತೋರಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.

ಅಮಾಯಕ ಯುವಕರ ಮೇಲೆ ದಾಖಲಿಸಿದ ಸುಳ್ಳು ಮೋಕದ್ದಮೆಯನ್ನು ಕೈಬಿಡಬೇಕು, ಹಾಗೂ ನೈಜ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತರನ್ನು ಈ ಕೂಡಲೇ ಬಂಧಿಸಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು SDPI ಹಾಗೂ ನಾಗರಿಕರು ಜ.6 ರಂದು ಬೆಳ್ತಂಗಡಿ ಠಾಣೆಯ ಮುಂಬಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು . ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉನ್ನತ ಪೋಲಿಸ್ ಅಧಿಕಾರಿಗಳು ಆರೋಪಿಗಳನ್ನು ನಾಲ್ಕು ದಿನಗಳೊಳಗಾಗಿ ಬಂಧಿಸುತ್ತೇವೆ ದಯವಿಟ್ಟು ನೀವು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಪಕ್ಷದ ನಾಯಕರಲ್ಲಿ ವಿನಂತಿಸಿದ ಪರಿಣಾಮ ಪೋಲಿಸ್ ಅಧಿಕಾರಿಗಳ ಮಾತಿಗೆ ಗೌರವಕೊಟ್ಟು ತಾತ್ಕಾಲಿಕವಾಗಿ ಪ್ರತಿಭಟನೆ ಯನ್ನು ಕೈ ಬಿಟ್ಟಿದ್ದೆವು ಎಂದು ಅವರು ತಿಳಿಸಿದ್ದಾರೆ.

ಈಗ ಪೋಲಿಸ್ ಅಧಿಕಾರಿಗಳು ನೈಜ ಆರೋಪಿಗಳನ್ನು ಬಂಧಿಸಲು ಹಾಗೂ ಅಮಾಯಕರ ಮೇಲಿನ ಪ್ರಕರಣ ಕೈ ಬಿಡಲು ನಾಲ್ಕು ದಿವಸದ ಕಾಲಾವಕಾಶ ಕೋರಿದ್ದು ಅದರ ಒಳಗಾಗಿ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಸಂಘಟನೆ ಹಾಗೂ ನಾಗರಿಕರನ್ನು ಒಟ್ಟು ಸೇರಿಸಿಕೊಂಡು ‘ಬೆಳ್ತಂಗಡಿ ಚಲೋ’ ಎಂಬ ಬೃಹತ್ ಹೋರಾಟವನ್ನು ನಡೆಸಲಿದ್ದೇವೆ ಎಂದು SDPI ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp