ರಾಷ್ಟ್ರಪತಿ ಕೋವಿಂದ್ ಭೇಟಿ ವೇಳೆ ಟ್ರಾಫಿಕ್‌ ತಡೆ; ಮಹಿಳೆ ಸಾವು : ಪೊಲೀಸರಿಂದ ಕ್ಷಮೆ ಯಾಚನೆ

Prasthutha|

ಲಖನೌ : ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭೇಟಿಯ ವೇಳೆ ಮಾಡಲಾದ ಟ್ರಾಫಿಕ್‌ ತಡೆಯಿಂದಾಗಿ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಕುಟುಂಬಿಕರಲ್ಲಿ ಕ್ಷಮೆ ಯಾಚಿಸಿದ್ದಾರೆ.

- Advertisement -

ರಾಷ್ಟ್ರಪತಿ ಕೋವಿಂದ್‌ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಉತ್ತರ ಪ್ರದೇಶಕ್ಕೆ ಬಂದಿದ್ದರು. ಕಾನ್ಪುರಕ್ಕೆ ನಿನ್ನೆ ರಾತ್ರಿ ಅವರ ರೈಲು ಆಗಮಿಸಿತ್ತು.

ಇಂಡಿಯನ್‌ ಅಸೋಸಿಯೇಶನ್‌ ಆಫ್‌ ಇಂಡಸ್ಟ್ರೀಸ್‌ ನ ಕಾನ್ಪುರ ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ವಂದನಾ ಮಿಶ್ರಾ ಸಾವಿಗೀಡಾದ ಮಹಿಳೆ. ಕೋವಿಡ್‌ ನಿಂದ ಇತ್ತೀಚೆಗೆ ಗುಣಮುಖರಾಗಿದ್ದ ವಂದನಾ ನಿನ್ನೆ ಹಠಾತ್‌ ಅನಾರೋಗ್ಯಕ್ಕೆ ಗುರಿಯಾದುದರಿಂದ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತಿತ್ತು.

- Advertisement -

ವಂದನಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದ ಮಾರ್ಗದಲ್ಲೇ ರಾಷ್ಟ್ರಪತಿ ಅವರೂ ಹಾದು ಹೋಗಲಿದ್ದುದರಿಂದ, ರಸ್ತೆ ತಡೆ ಹಿಡಿಯಲಾಗಿತ್ತು. ಇದರಿಂದಾಗಿ ವಾಹನಗಳು ಸಾಲುಗಟ್ಟು ನಿಲ್ಲುವಂತಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ವಂದನಾ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

Join Whatsapp