Home ಟಾಪ್ ಸುದ್ದಿಗಳು ಮುಸ್ಲಿಮ್ ವೃದ್ಧನಿಗೆ ಹಲ್ಲೆ ಪ್ರಕರಣ: ಮುಖ್ಯ ಆರೋಪಿಗೆ ಜಾಮೀನು

ಮುಸ್ಲಿಮ್ ವೃದ್ಧನಿಗೆ ಹಲ್ಲೆ ಪ್ರಕರಣ: ಮುಖ್ಯ ಆರೋಪಿಗೆ ಜಾಮೀನು

ನವದೆಹಲಿ: ಮುಸ್ಲಿಮ್ ವೃದ್ಧರೊಬ್ಬರಿಗೆ ಗಂಭೀರವಾಗಿ ಥಳಿಸಿ ಗಡ್ಡ ಕತ್ತರಿಸಿದ ಗಾಜಿಯಾಬಾದ್ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಪ್ರವೇಶ್ ಗುರ್ಜಾರ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗುರ್ಜಾರ್ ಗೆ ಜಾಮೀನು ದೊರೆತರೂ ಇತರ ಪ್ರಕರಣಗಳಲ್ಲಿ ವಿಚಾರಣೆ ಬಾಕಿಯಿರುವುದರಿಂದ ಆತನಿಗೆ ಬಿಡುಗಡೆ ಭಾಗ್ಯ ದೊರೆತಿಲ್ಲ.

ಯುಪಿಯ ಲೋನಿ ಪಟ್ಟಣದ ನಿವಾಸಿ 72 ವರ್ಷ ಪ್ರಾಯದ ಅಬ್ದುಲ್ ಸಮದ್ ಎಂಬವರ ಮೇಲೆ ಹಲ್ಲೆ ನಡೆಸಿ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಪಡಿಸಲಾಗಿತ್ತು. ಘಟನೆಗೆ ಸಂಬಂಧಿಸಿದ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಾಯತ ತಯಾರಿಸುತ್ತಿದ್ದ ಕಾರಣ ಈತನ ಮೇಲೆ ದಾಳಿಯಾಗಿದೆ ಹೊರತು ಈ ಪ್ರಕರಣದಲ್ಲಿ ಯಾವುದೇ ಧಾರ್ಮಿಕ ಅಂಶಗಳು ಒಳಗೊಂಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಸಂತ್ರಸ್ತ ಅಬ್ದುಲ್ ಸಮದ್ ರನ್ನು ಸಂದರ್ಶನ ನಡೆಸಿದ ಸಮಾಜವಾದಿ ಪಕ್ಷದ ಉಮೇದ್ ಪಹಲ್ವಾನ್ ಸಹಿತ ಹಲವು ಮುಸ್ಲಿಮ್ ಯುವಕರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಧಾರ್ಮಿಕ ಆಧಾರದಲ್ಲಿ ಅಬ್ದುಲ್ ಸಮದ್ ಮೇಲೆ ಹಲ್ಲೆ ನಡೆಸಲಾಗಿದೆಯೆಂದು ಟ್ವೀಟ್ ಮಾಡಿದ್ದ ಆರೋಪದಲ್ಲಿ ಪತ್ರಪರ್ತರು ಮತ್ತು ರಾಜಕಾರಣಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪತ್ರಕರ್ತರಾದ ರಾಣಾ ಅಯ್ಯೂಬ್, ಮುಹಮ್ಮದ್ ಝುಬೇರ್ ಮತ್ತು ಕಾಂಗ್ರೆಸ್ ವಕ್ತಾರ ಡಾ. ಶಮಾ ಮುಹಮ್ಮದ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version