Home ಟಾಪ್ ಸುದ್ದಿಗಳು ಜಹಾಂಗೀರ್ ಪುರಿಯ ನಡೆದ ಸಾಂಸ್ಥಿಕ ಮುಸ್ಲಿಮ್ ದ್ವೇಷದ ಕ್ರೂರ ಪ್ರದರ್ಶನ: ಪಾಪ್ಯುಲರ್ ಫ್ರಂಟ್

ಜಹಾಂಗೀರ್ ಪುರಿಯ ನಡೆದ ಸಾಂಸ್ಥಿಕ ಮುಸ್ಲಿಮ್ ದ್ವೇಷದ ಕ್ರೂರ ಪ್ರದರ್ಶನ: ಪಾಪ್ಯುಲರ್ ಫ್ರಂಟ್

ನವದೆಹಲಿ: ರಾಮನವಮಿ ರಾಲಿಗಳ ನಂತರ ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯು ಕಳವಳಕಾರಿಯಾಗಿದೆ ಮತ್ತು ಸನ್ನಿಹಿತವಾದ ನರಮೇಧದ ಪೂರ್ವಭಾವಿಯಾಗಿದೆ. ಜಹಾಂಗೀರ್ ಪುರಿಯ ಧ್ವಂಸ ಕಾರ್ಯಾಚರಣೆಯು ಸಾಂಸ್ಥಿಕ ಮುಸ್ಲಿಮ್ ದ್ವೇಷದ ಕ್ರೂರ ಪ್ರದರ್ಶನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೇಳಿದೆ.


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆಯು 20 ಏಪ್ರಿಲ್ 2022ರಂದು ಚೆನ್ನೈನಲ್ಲಿ ನಡೆದಿದ್ದು, ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ವಾಸ್ತವದಲ್ಲಿ, ವಿವಿಧ ರಾಜ್ಯಗಳಲ್ಲಿ ಮುಸ್ಲಿಮ್ ವಿರೋಧಿ ದ್ವೇಷ ಮತ್ತು ಹಿಂಸಾಚಾರವು ವ್ಯಾಪಕವಾಗಿ ಮತ್ತು ಏಕಕಾಲದಲ್ಲಿ ಸಂಭವಿಸಿದೆ ಎಂಬ ಅಂಶವು ಒಂದು ದೊಡ್ಡ ಯೋಜನೆಯನ್ನು ಸೂಚಿಸುತ್ತದೆ. ಹಿಂದುತ್ವ ಪ್ರಾಯೋಜಿತ ಗುಂಪುಗಳಿಗೆ ಮುಸ್ಲಿಮ್ ಬಾಹುಳ್ಯ ಪ್ರದೇಶಗಳನ್ನು ಲೂಟಿ ಮಾಡಲು ಮುಕ್ತ ಅವಕಾಶವನ್ನು ನೀಡಲಾಯಿತು ಮತ್ತು ಸ್ವತಃ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಕಾರಣಕ್ಕಾಗಿ ಸಮುದಾಯವು ಈಗ ಕಿರುಕುಳಕ್ಕೆ ಒಳಗಾಗುತ್ತಿದೆ. ಈಗ ನಡೆಯುತ್ತಿರುವುದು ರಾಜ್ಯ ಪ್ರಾಯೋಜಿತ ಜನಾಂಗೀಯ ನಿರ್ಮೂಲನೆಯಾಗಿದ್ದು, ಬಿಜೆಪಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರವು ಅದರಲ್ಲಿ ಇಚ್ಛಾಶಕ್ತಿಯೊಂದಿಗೆ ಪಾಲ್ಗೊಳ್ಳುತ್ತಿವೆ ಎಂದು ನಿರ್ಣಯ ತಿಳಿಸಿದೆ.


ಮತ್ತೊಂದು ನಿರ್ಣಯದಲ್ಲಿ, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ಮನೆಗಳು ಮತ್ತು ಆಸ್ತಿಪಾಸ್ತಿಗಳ ಧ್ವಂಸ ಕಾರ್ಯಾಚರಣೆಯನ್ನು ಪಾಪ್ಯುಲರ್ ಫ್ರಂಟ್ ನ ಎನ್ಇಸಿ ಬಲವಾಗಿ ಖಂಡಿಸಿದೆ. ಜಹಾಂಗೀರ್ಪುರಿಯಲ್ಲಿ ಬಿಜೆಪಿ ಆಡಳಿತವಿರುವ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆಡಳಿತವು ಅಲ್ಲಿನ ನಿವಾಸಿಗಳ ಮೇಲೆ ಹಿಂದುತ್ವದ ಗುಂಪುಗಳ ದಾಳಿಗೆ ಒಳಗಾದ ನಂತರ ನಡೆಸಿದ ಧ್ವಂಸ ಕಾರ್ಯಾಚರಣೆಯು ಸಾಂಸ್ಥಿಕ ಮುಸ್ಲಿಮ್ ದ್ವೇಷದ ಕ್ರೂರ ಪ್ರದರ್ಶನವಾಗಿದೆ. ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಉಲ್ಲಂಘಿಸಿ ಮತ್ತು ಸೂಕ್ತ ಪ್ರಕ್ರಿಯೆಯ ನಡೆಸದೆ ಇದನ್ನು ನಡೆಸಲಾಯಿತು. ಅಲ್ಲಿನ ನಿವಾಸಿಗಳು ಮತ್ತು ಮಾಲೀಕರಿಗೆ ಈ ಕಾರ್ಯಾಚರಣೆಯ ಕುರಿತು ಪೂರ್ವಭಾವಿಯಾಗಿ ಮಾಹಿತಿ ನೀಡಿರಲಿಲ್ಲ ಅಥವಾ ಆಡಳಿತದ ನಿರ್ಧಾರವನ್ನು ಪ್ರಶ್ನಿಸಲು ಅನುಮತಿಸಲಾಗಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ, ಅಧಿಕಾರಿಗಳು ಪ್ರಕ್ರಿಯೆಯನ್ನು ನಿಲ್ಲಿಸಲು ನಿರಾಕರಿಸಿದರು.

ಈ ಕಾರ್ಯಾಚರಣೆ ಅಕ್ರಮ ಒತ್ತುವರಿ ವಿರುದ್ಧ ನಡೆದ ಕ್ರಮ ಎಂದು ಪ್ರತಿಪಾದಿಸಲಾಗುತ್ತಿದ್ದು, ಇದು ದೊಡ್ಡ ಸುಳ್ಳಾಗಿದೆ. ಹನುಮ ಜಯಂತಿ ಆಚರಣೆಯ ಹೆಸರಿನಲ್ಲಿ ನಡೆದ ಸಂಘಪರಿವಾರದ ದೌರ್ಜನ್ಯವನ್ನು ಪ್ರತಿರೋಧಿಸಿದ ಕಾರಣಕ್ಕಾಗಿ ಜಹಾಂಗೀರ್ ಪುರಿ ಜನರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ.


ಈ ರೀತಿಯ ಘೋರ ಅನ್ಯಾಯ ನಡೆಯುತ್ತಿರುವಾಗ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮೌನ ಮುರಿಯಬೇಕು. ಜನರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ. ವಿಶೇಷವಾಗಿ, ಅವರ ಪಕ್ಷವು ಹಿಂಸಾಚಾರವನ್ನು ಬಿಜೆಪಿಯಿಂದ ಪ್ರಾರಂಭಿಸಲಾಗಿತ್ತು ಎಂದು ಸ್ಪಷ್ಟವಾಗಿ ಹೇಳಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ ಎಂದು ನಿರ್ಣಯ ಹೇಳಿದೆ.


ದೇಶದಲ್ಲಿನ ಮುಸ್ಲಿಮ್ ಸಂಘಟನೆಗಳು ಮತ್ತು ಪಕ್ಷಗಳು ಈ ಉಲ್ಲಂಘನೆಗಳನ್ನು ಪ್ರಜಾಸತ್ತಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಪ್ರತಿರೋಧಿಸಬೇಕು. ಅದೇ ರೀತಿ ಪ್ರಭುತ್ವದ ಕ್ರೂರ ದಬ್ಬಾಳಿಕೆಯಲ್ಲಿ ಮನೆ ಮತ್ತು ಜೀವನೋಪಾಯವನ್ನು ಕಳೆದುಕೊಂಡ ಜನರಿಗೆ ನೆರವು ನೀಡಲು ಮುಂದೆ ಬರಬೇಕೆಂದು ಪಾಪ್ಯುಲರ್ ಫ್ರಂಟ್ ಕರೆ ನೀಡಿದೆ.

Join Whatsapp
Exit mobile version