ಪೊಲೀಸರ ಮೇಲೆ ಹಲ್ಲೆ: ಸಹೋದರರಿಬ್ಬರನ್ನು ರೌಡಿ ಪಟ್ಟಿಗೆ ಸೇರಿಸಿದ ಪೊಲೀಸರು

Prasthutha|

ಬೆಂಗಳೂರು; ದಾರಿ ಬಿಡುವ ವಿಚಾರಕ್ಕಾಗಿ ಜಗಳ ತೆಗೆದು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಅಣ್ಣ-ತಮ್ಮನನ್ನು ಯಲಹಂಕ ಉಪನಗರ ಪೊಲೀಸರು ರೌಡಿ ಪಟ್ಟಿಗೆ ಸೇರಿಸಿದ್ದಾರೆ.

- Advertisement -


ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಧೀರಜ್ ಹಾಗೂ ಮನೋಜ್ ರೌಡಿಶೀಟರ್ಗಳಾಗಿದ್ದು ಇವರಿಬ್ಬರೂ ಸಹೋದರರಾಗಿದ್ದಾರೆ. ಮನೋಜ್ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೆ, ಸಹೋದರ ಧೀರಜ್ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ರಸ್ತೆ ದಾಟುವಾಗ ಮಾಡಿಕೊಂಡ ಎಡವಟ್ಟು ಹಾಗೂ ಕೋಪದ ಕೈಗೆ ಬುದ್ದಿಕೊಟ್ಟು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ರೌಡಿ ಪಟ್ಟಿಗೆ ಸೇರಿದ್ದಾರೆ.


ಕಳೆದ ಡಿ. 6ರಂದು ರಾತ್ರಿ 11 ಗಂಟೆ ಸುಮಾರಿಗೆ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ಚಿಕ್ಕಬೆಟ್ಟಹಳ್ಳಿ ಸರ್ಕಲ್ ಬಳಿ ಗಲಾಟೆ ನಡೆದಿದೆ. ಕಾರನ್ನು ರಸ್ತೆ ದಾಟಿಸುವಾಗ ಪೊಲೀಸರ ಜೊತೆ ನಡೆದ ಮಾತಿನ ಚಕಮಕಿ ಹಲ್ಲೆಗೆ ತಿರುಗಿತ್ತು. ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಬೈದಿದ್ದರು. ಸಾರ್ವಜನಿಕರು ಗಲಾಟೆ ಬಿಡಿಸಲು ಬಂದರೂ ಲೆಕ್ಕಿಸದೇ ಪೊಲೀಸರ ಮೇಲೆ ಕೈಮಾಡಿ ಇದೀಗ ಕಂಬಿ ಎಣಿಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡುವ ಸುದ್ದಿ ತಿಳಿದು ಗೃಹ ಆರಗ ಜ್ಞಾನೇಂದ್ರ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು.

Join Whatsapp