Home ರಾಜ್ಯ ಬೆಂಗಳೂರಿನಲ್ಲಿ ಸಿಗುವ ತರಕಾರಿಗಳಲ್ಲಿ ವಿಷ: ಕೆಆರ್‌ಎಸ್ ಆಕ್ರೋಶ

ಬೆಂಗಳೂರಿನಲ್ಲಿ ಸಿಗುವ ತರಕಾರಿಗಳಲ್ಲಿ ವಿಷ: ಕೆಆರ್‌ಎಸ್ ಆಕ್ರೋಶ

ಬೆಂಗಳೂರು: ನಗರಕ್ಕೆ ಸರಬರಾಜಾಗುತ್ತಿರುವ ತರಕಾರಿಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಭಾರ ಲೋಹ ಇದೆ. ಇದು ಗಂಭೀರ ವಿಷವಾಗಿದೆ. ಈ ಷಾಕಿಂಗ್ ಮಾಹಿತಿ ಎಂಪ್ರಿ ಅಧ್ಯಯನದಿಂದ ದೃಢಪಟ್ಟಿದೆ. ಈ ಪರಿಸ್ಥಿತಿಗೆ ಕಾರಣವಾಗಿರುವ ಬೆಂಗಳೂರು ಜಲ ಮಂಡಳಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ಕೊಳಚೆ ನೀರು ಬಳಸಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲಿ ಭಾರ ಲೋಹದ ಸಾಂದ್ರತೆ ಹೆಚ್ಚಾಗಿದೆ. ಇಂಥ ತರಕಾರಿ ಹೊಟ್ಟೆಗೆ ಸೇರಿದರೆ ಮಾನವನ ದೇಹಕ್ಕೆ ವಿಷಕಾರಿ ಅಂಶ ಸೇರ್ಪಡೆಯಾಗುವ ಅಪಾಯವಿದೆ ಎಂದು ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (ಎಂಪ‍್ರಿ) ಅಧ್ಯಯನ ತಿಳಿಸಿದೆ ಎಂದಿದ್ದಾರೆ. ಜನರ ಆರೋಗ್ಯದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುವ ಈ ವಿಚಾರದ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿಷ್ಕಾಳಜಿ ತೋರುತ್ತಿದ್ದಾರೆ. ಈ ಪರಿಸ್ಥಿತಿಗೆ ಕಳೆದ ಎರಡು ದಶಕಗಳ ಕಾಲ ಆಡಳಿತ ನಡೆಸಿರುವ ಸರ್ಕಾರಗಳೇ ನೇರ ಕಾರಣ. ಇನ್ನಾದರೂ ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿಗೆ ಬರುವ ತರಕಾರಿಗಳಲ್ಲಿ ಬಹುಪಾಲು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳದ್ದು. ಈ ಜಿಲ್ಲೆಗಳು ನೀರಾವರಿಯಿಂದ ವಂಚಿತವಾಗಿವೆ. ರಾಮನಗರ ಜಿಲ್ಲೆ ಹೊರತುಪಡಿಸಿ ಉಳಿದ ಮೂರು ಜಿಲ್ಲೆಗಳಿಗೆ ಕೊಳಚೆ ನೀರು ಸಂಸ್ಕರಿಸಿ, ಕೆರೆಗಳನ್ನು ತುಂಬಿಸಲಾಗುತ್ತಿದೆ. ನೀರಾವರಿಯಿಂದ ವಂಚಿತವಾಗಿರುವ ಈ ಜಿಲ್ಲೆಗಳಲ್ಲಿನ ಬಹುಪಾಲು ರೈತರು ಅರೆ ಬರೆ ಸಂಸ್ಕರಿಸಿದ ಬೆಂಗಳೂರಿನ ಕೊಳಚೆ ನೀರು ಬಳಸಿ, ತರಕಾರಿಗಳನ್ನು ಬೆಳೆಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಈ ಮಾಹಿತಿ ಎಂಪ್ರಿಯ ಅಧ್ಯಯದ 2022ರ ನವೆಂಬರ್‌ನಲ್ಲಿ ಪ್ರಕಟವಾಗಿದೆ. ಆದರೆ ಇದುವರೆಗೂ ಈ ಬಗ್ಗೆ ಕ್ರಮಕೈಗೊಳ್ಳಲಾಗಲಿಲ್ಲ. ಸರ್ಕಾರದ ನಿಷ್ಕಾಳಜಿ, ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ಪ್ರಸ್ತುತ ಬೆಂಗಳೂರು ಮತ್ತು ಈ ಮೂರು ಜಿಲ್ಲೆಗಳ ಜನರು ವಿಷಯುಕ್ತ ಆಹಾರ ಸೇವಿಸುವಂತಾಗಿದೆ. ಸರ್ಕಾರವೇ ಮುಂದೆ ನಿಂತು ಜನರಿಗೆ ವಿಷವುಣಿಸುತ್ತಿದೆ. ಮಾಲಿನ್ಯವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳದೇ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿ ಕುಳಿತಿದೆ ಎಂದು ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version