Home ಕರಾವಳಿ ಅಮಾಯಕ ಮುಸ್ಲಿಂ ಯುವಕರಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ,ಕೊಲೆಯತ್ನ : ಪಾಪ್ಯುಲರ್ ಫ್ರಂಟ್ ಖಂಡನೆ

ಅಮಾಯಕ ಮುಸ್ಲಿಂ ಯುವಕರಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ,ಕೊಲೆಯತ್ನ : ಪಾಪ್ಯುಲರ್ ಫ್ರಂಟ್ ಖಂಡನೆ

ಬೆಳ್ತಂಗಡಿ ತಾಲೂಕಿನ ಮೇಲೆಂತಬೆಟ್ಟು ಎಂಬಲ್ಲಿ ನಿನ್ನೆ ರಾತ್ರಿ ಪಿಕಪ್ ನಲ್ಲಿ ಸಂಚರಿಸುತ್ತಿದ್ದ ಅಮಾಯಕ ಮುಸ್ಲಿಂ ವೃದ್ದ ವ್ಯಕ್ತಿ ಹಾಗೂ ಇನ್ನೋರ್ವ ಯುವಕನಿಗೆ ಸಂಘಪರಿವಾರದ ಸುಮಾರು 50  ಕಾರ್ಯಕರ್ತರು ಉತ್ತರ ಪ್ರದೇಶದ ಮಾದರಿಯಲ್ಲಿ ಅಮಾನುಷ ರೀತಿಯಲ್ಲಿ ಹಲ್ಲೆ ಹಾಗೂ ಕೊಲೆಯತ್ನ ನಡೆಸಿದ ಬೀಬತ್ಸ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಬೆಳ್ತಂಗಡಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಗ್ಯಾರೇಜ್ ನಲ್ಲಿ ತಮ್ಮ ಪಿಕಪ್ ವಾಹನದ ರಿಪೇರಿ ನಡೆಸಿ ಸವಣಾಲು ಎಂಬಲ್ಲಿ ತಮ್ಮ ಸಂಬಂದಿಕರ ಮನೆಗೆ ಊಟಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರದ ಸುಮಾರು 50  ಕಾರ್ಯಕರ್ತರು  ಉತ್ತರ ಪ್ರದೇಶ ಮಾದರಿಯಲ್ಲಿ ಜಾನುವಾರು ಸಾಗಾಟ ಎನ್ನುವ ಸುಳ್ಳು ಆರೋಪ ಮಾಡಿ ಪಿಕಪ್ ವಾಹನಕ್ಕೆ ಅಡ್ಡಗಟ್ಟಿ ಕೊಲೆಗೆ ಯತ್ನಿಸಿ ಭೀಕರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಮತ್ತು ಅಮಾನುಷ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ.

ಬಿಜೆಪಿ ಶಾಸಕ ಹರೀಶ್ ಪೂಂಜಾ ಕ್ಷೇತ್ರದಲ್ಲಿ ಇಂತಹ ಘಟನೆಗಳು ಪದೇ ಪದೇ ಪುನರಾವರ್ತನೆ ಯಾಗುತ್ತಲೇ ಇದ್ದು, ಆರೋಪಿಗಳ ವಿರುದ್ಧ ಪೋಲಿಸರು ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಘಟನೆಗಳು ಪುನರಾವರ್ತನೆ ಯಾಗುತ್ತಲೇ ಇದೆ. ಪ್ರಸ್ತುತ ಘಟನೆಯಲ್ಲಿ 5 ಆರೋಪಿಗಳನ್ನು ಬಂಧಿಸಿದರು ಕೂಡ ಪೋಲಿಸರು 307(ಕೊಲೆ ಯತ್ನ) ಪ್ರಕರಣ ದಾಖಲಿಸದೆ 326 ಸೆಕ್ಷನ್ ಹಾಕಿ ಸುಲಭವಾಗಿ ಜಾಮೀನು ಸಿಗುವ ರೀತಿಯಲ್ಲಿ ಸೆಕ್ಷನ್ ಹಾಕಿರುವುದು ವಿಪರ್ಯಾಸವಾಗಿದೆ. ಹಲ್ಲೆಗೊಳಗಾದ ವ್ಯಕ್ತಿಗಳನ್ನು ನೋಡಿದರೆ ಯಾವ ರೀತಿಯಲ್ಲಿ ಹಲ್ಲೆ ನಡೆಸಿ ಕೊಲೆಗೆಯ್ಯಲು ಯತ್ನಿಸಿದ್ದಾರೆ ಎಂದು ತಿಳಿಯುತ್ತದೆ.

ಹಾಗಾಗಿ ಪೋಲಿಸ್ ಇಲಾಖೆ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಬೇಕು. ಅದೇ ರೀತಿಯಲ್ಲಿ ಇಂತಹ ಕೃತ್ಯವನ್ನು ನಡೆಸಲು ಆರೋಪಿಗಳನ್ನು ಛೂ ಬಿಟ್ಟ ಸೂತ್ರಧಾರಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಮುಸ್ತಫಾ ಜಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version