ಗಾಂಧಿಯನ್ನು ಕೊಂದ ಆರ್ ಎಸ್ ಎಸ್ ? । ಕ್ಯಾಂಪಸ್ ಫ್ರಂಟ್ ನಿಂದ ವಿಚಾರ ಸಂಕಿರಣ
ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಹುತಾತ್ಮ ದಿನದ ಅಂಗವಾಗಿ ಜನವರಿ 30 ರಂದು ಗಾಂಧಿಯನ್ನು ಕೊಂದ ಆರ್ ಎಸ್ ಎಸ್ ? ಎಂಬ ಘೋಷವಾಕ್ಯದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಬೆಂಗಳೂರಿನ ಎಂ ಸಿ ಎಮ್ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಪತ್ರಕರ್ತರು, ನಾವೆ ಕರ್ನಾಟಕದ ರಾಜ್ಯಾಧ್ಯಕ್ಷರು ಆದಂತಹ ಪಾರ್ವತೀಶ ಬಿಳಿದಾಳೆ ಮಾತನಾಡಿ ಗಾಂಧಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಅಳವಡಿಸಿಕೊಂಡು ಇಂದಿನ ಗೋಡ್ಸೆಯ ಮಾರಕ ಸಿದ್ದಾಂತವನ್ನು ತಡೆಯುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ, ಅದಕ್ಕೆ ಬೇಕಾಗಿ ಸಮಾಜದ ಪ್ರತೀ ಸಮರ್ಪಣಾ ಮನೋಭಾವವನ್ನು ಬೆಳೆಸಿಕೊಂಡು ಅಹಿಂಸಾ ತತ್ವದಡಿ ಹೋರಾಟಗಳನ್ನು ರೂಪಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದು ತಿಳಿಸಿದರು. .
ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗೋಡ್ಸೆ ಪಸರಿಸಿದ ಸಿದ್ದಾಂತವನ್ನೇ ರಾಷ್ಟ್ರೀಯತೆಯೆಂದು ಬಿಂಬಿಸಿ ಗಾಂಧಿಯಿಂದ ಹಿಡಿದು ದಾಭೋಲ್ಕರ್, ಪನ್ಸಾರೆ, ಗೌರಿ ಲಂಕೇಶ್ ನಂತಹ ಪ್ರಗತಿಪರ ಚಿಂತಕರನ್ನು ಗುಂಡಿಕ್ಕಿ ಕೊಂದ ಹಿಂದುತ್ವ ಸಿದ್ದಾಂತವನ್ನು ಸೋಲಿಸುವುದು ಜಾತ್ಯತೀತ ಆಶಯದಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬ ಭಾರತೀಯ ನಾಗರಿಕನ ಜವಾಬ್ದಾರಿ ಎಂದು ತಿಳಿಸಿದರು.
ಉದ್ಘಾಟನಾ ಮಾತುಗಳನ್ನಾಡಿದ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ವಾನ್ ಸಾಧಿಕ್ ಮಾತನಾಡಿ ಗೋಡ್ಸೆಯೆಂಬ ಒಬ್ಬ ವ್ಯಕ್ತಿಯಿಂದ ಮಾತ್ರ ಮಹಾತ್ಮ ಗಾಂಧಿಯ ಹತ್ಯೆಯಾಗಿಲ್ಲ, ಬದಲಾಗಿ ಇದರ ಹಿಂದೆ ಸಂಚು ರೂಪಿಸಿ ಗಾಂಧಿಯ ಕೊಲೆಗೆ ಪ್ರೇರೇಪಿಸಿದ್ದು ಆರ್ ಎಸ್ ಎಸ್ ಎಂಬುದು ಸುಳ್ಳಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಬಹಿರಂಗವಾಗಿ ಗಾಂಧಿಯನ್ನು ಹೀಯಾಳಿಸಿ ಗೋಡ್ಸೆಯನ್ನು ಆರಾಧಿಸುವ ಬೆಳವಣಿಗೆಗಳು ಗಮನಿಸುವಾಗ ಕೋಮುದ್ವೇಷವು ಉತ್ತುಂಗಕ್ಕೇರಿ ಸಮಾಜದ ಪ್ರತೀ ಹಂತದಲ್ಲೂ ತಾಂಡವಾಡುತ್ತಿದ್ದು ಇದನ್ನು ಎದುರಿಸಿ ಗಾಂಧಿ ಕಂಡ ಜಾತ್ಯಾತೀತ ಭಾರತದ ನಿರ್ಮಾಣಕ್ಕಾಗಿ ನಮ್ಮ ಸರ್ವಸ್ವವನ್ನು ನ್ಯಾಯದ ಹೋರಾಟದಲ್ಲಿ ಮುಡಿಪಾಗಿಟ್ಟು ನವ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕೋಣ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಝುಬೈರ್ ಬೆಂಗಳೂರು ಸ್ವಾಗತಿಸಿ, ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಬೆಂಗಳೂರು ವಂದಿಸಿದರು.
![](https://prasthutha.com/wp-content/uploads/2022/01/9de4fbcf-8c9e-4ff5-bc39-4e923cfe563b-1024x682.jpg)
![](https://prasthutha.com/wp-content/uploads/2022/01/e14c7898-e94c-416b-8058-892517c50905-1024x682.jpg)