“ಪಂಜರದ ಗಿಣಿಯಾಗುವುದು ಎಷ್ಟು ಕೆಟ್ಟದ್ದೋ, ಅದಕ್ಕಿಂತಲೂ ಕೆಟ್ಟದ್ದು ಬಂಧಮುಕ್ತಗೊಂಡು ದಾಂಧಲೆ ನಡೆಸುವುದು”: ಅಭಿಷೇಕ್ ಮನು ಸಿಂಘ್ವಿ

Prasthutha|

ಕೊಲ್ಕತ್ತಾ: ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕರ ಬಂಧನ ವಿಚಾರವಾಗಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಇಂದು ನಡೆದ ವಾದ ಮಂಡಿಸುವ ವೇಳೆ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಸಿಬಿಐ ಕುರಿತು ಕೆಲ ಕಟು ಶಬ್ದಗಳನ್ನು ಬಳಸಿದ್ದಾರೆ.

- Advertisement -

2013ರಲ್ಲಿ ಸುಪ್ರೀಂಕೋರ್ಟ್‌ ಸಿಬಿಐಯನ್ನು ಪಂಜರದಲ್ಲಿರುವ ಗಿಳಿ ಎಂದು ಬಣ್ಣಿಸಿದ್ದನ್ನು ಉಲ್ಲೇಖಿಸಿದ ಅವರು “ಪಂಜರದ ಗಿಳಿಯಾಗುವುದು ಕೆಟ್ಟದ್ದು. ಆದರೆ, ಎಲ್ಲರ ಮನೆಗೂ ನುಗ್ಗಿ, ದಾಂಧಲೆ ಮಾಡುವಷ್ಟು ಬಂಧಮುಕ್ತಗೊಳ್ಳುವುದು ಮತ್ತೂ ಕೆಟ್ಟದ್ದು” ಎಂದು ಅವರು ಮಾರ್ಮಿಕವಾಗಿ ನುಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುವ ಭೀತಿ ಇಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತಿದ್ದ ವೇಳೆ ಸಿಂಘ್ವಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

- Advertisement -

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತಿತರರ ಟಿಎಂಸಿ ನಾಯಕರು ಕಚೇರಿಯ ಹೊರಗೆ ಧರಣಿ ಕುಳಿತು ತನಗೆ ಬೆದರಿಕೆ ಹಾಕಿದ್ದರು, ನ್ಯಾಯಾಂಗ ಪ್ರಕ್ರಿಯೆಗೆ ಕೂಡ ಇದರಿಂದ ಧಕ್ಕೆಯಾಗಬಹುದು ಎಂಬುದನ್ನು ಉಲ್ಲೇಖಿಸಿದ್ದ ಸಿಬಿಐ ಪ್ರಕರಣವನ್ನು ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯದಿಂದ ಕಲ್ಕತ್ತಾ ಹೈಕೋರ್ಟ್ ಅಥವಾ ಇನ್ನಾವುದೇ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿತ್ತು.

ಆದರೆ ಸಿಬಿಐ ವಿಶೇಷ ನ್ಯಾಯಾಲಯದ ಮೂರನೇ ಮಹಡಿಗೆ ರಾಜ್ಯ ಕಾನೂನು ಸಚಿವರು ತೆರಳಿದ್ದರು ಎಂಬ ಹೇಳಿಕೆಯನ್ನು ಅಭಿಷೇಕ್‌ ಮನು ಸಿಂಘ್ವಿ ನಿರಾಕರಿಸಿದರು. ಸಿಬಿಐ ಅಧಿಕಾರಿಗಳು ನ್ಯಾಯಾಲಯ ಪ್ರವೇಶಿಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡಿರಲಿಲ್ಲ. ಪ್ರಕರಣದ ವಿಚಾರಣೆ ವರ್ಚುವಲ್‌ ವಿಧಾನದಲ್ಲಿ ನಡೆದಿತ್ತು. ಅಡೆತಡೆ ಉಂಟಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಅದೊಂದು ಆನಂತರ ರೂಪುಗೊಂಡಿರುವ ಆಲೋಚನೆಯಷ್ಟೇ ಎಂದು ಅವರು ಹೇಳಿದರು.

ಸಿಬಿಐ ನ್ಯಾಯಾಲಯದ ಹೊರಗೆ ಸಾವಿರಾರು ಜನ ಸೇರಿದ್ದರು ಎಂದು ತೋರಿಸುವ ನೈಜ ಛಾಯಾಚಿತ್ರಗಳಾಗಲೀ, ದೃಶ್ಯವಾಳಿಗಳಾಗಲಿ ಇಲ್ಲ. ಸಿಬಿಐ ಆರೋಪ ದಿಕ್ಕುತಪ್ಪಿಸುವಂತಿದೆ ಮತ್ತು ಅಸಂಬದ್ಧವಾಗಿದೆ ಎಂದು ಅವರು ವಿವರಿಸಿದ್ದಾರೆ.

Join Whatsapp