Home ಜಾಲತಾಣದಿಂದ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡ ಶಿಹಾಬ್ ಚೊಟೂರುಗೆ ವಿಸಾ ನಿರಾಕರಿಸಿದ ಪಾಕಿಸ್ತಾನ

ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡ ಶಿಹಾಬ್ ಚೊಟೂರುಗೆ ವಿಸಾ ನಿರಾಕರಿಸಿದ ಪಾಕಿಸ್ತಾನ

ಲೂದಿಯಾನ: ಕೇರಳದಿಂದ ಸೌದಿ ಅರೇಬಿಯಾದ ಮಕ್ಕಾಕ್ಕೆ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೊರಟಿದ್ದ ಶಿಹಾಬ್ ಚೊಟೂರು ಅವರಿಗೆ ಪಾಕಿಸ್ತಾನದ ಮೂಲಕ ನಡೆದುಕೊಂಡು ಹೋಗಲು ಅಲ್ಲಿನ ಸರ್ಕಾರ ವಿಸಾ ನಿರಾಕರಿಸಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಕೇರಳದ ಮಲಪ್ಪುರಂ ಜಿಲ್ಲೆಯ 29ರ ಹರಯದ ಯುವಕ ಶಿಹಾಬ್ ಚೊಟೂರು ಪಾದಯಾತ್ರೆ ಮೂಲಕ ಹಜ್ಜ್ ಯಾತ್ರೆ ಆರಂಭಿಸಿ ಇದೀಗ ಪಂಜಾಬ್ ತಲುಪಿದ್ದಾರೆ. ಒಟ್ಟು 123 ದಿನದ ಯಾತ್ರೆಯನ್ನು ಭಾರತದಲ್ಲಿ ಮುಗಿಸಿ   ಪಾಕಿಸ್ತಾನದ ಗಡಿ ತಲುಪಿದ್ದಾರೆ.

ಆದರೆ ಕಳೆದ ಏಳು ದಿನಗಳಿಂದ ಪಾಕಿಸ್ತಾನ ದೂತವಾಸ ಅಧಿಕಾರಿಗಳು ಶಿಹಾಬ್ ರವರ ವಿಸಾ ಅರ್ಜಿಯನ್ನು ವಿವಿಧ ಭದ್ರತೆ ಕಾರಣ ನೀಡಿ ನಿರಾಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.  

ಪಂಜಾಬ್ ನ ಲೂದಿಯಾನದ ಶಾಹಿ ಇಮಾಮ್ ಮೌಲಾನಾ ಉಸ್ಮಾನ್ ಲುಧಿಯಾನ್ವಿ ಅವರು ಪತ್ರಿಕಾಗೋಷ್ಠಿ ಕರೆದು ಶಿಹಾಬ್ ಚೊಟೂರು ಅವರಿಗೆ ಹಜ್ ಯಾತ್ರೆ ಕೈಗೊಳ್ಳಲು ಪಾಕಿಸ್ತಾನ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಚೀನಾ ಮೂಲಕವಾದರೂ ತೆರಳಲು ಅವಕಾಶ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ದೆಹಲಿಯ ಪಾಕಿಸ್ತಾನದ ರಾಯಭಾರ ಕಚೇರಿಯು ಈ ಮೊದಲು ಶಿಹಾಬ್ ಚೊಟೂರು ಅವರಿಗೆ ವಿಸಾ ನೀಡುವ ಭರವಸೆ ನೀಡಿತ್ತು. ಆದರೆ ಕಾಲ್ನಡಿಗೆ ಭಾರತ-ಪಾಕಿಸ್ತಾನ ಗಡಿಯ ಹತ್ತಿರ ತಲುಪಿದಾಗ ನಿರಾಕರಿಸುತ್ತಿದೆ. ಇದು ಸರಿಯಲ್ಲ. ತಕ್ಷಣ ವಿಸಾ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಿಹಾಬ್ ಚೊಟೂರು 8 ತಿಂಗಳಲ್ಲಿ 8500 ಕಿ.ಮೀ.ಪಾದಯಾತ್ರೆ ಮೂಲಕ ಮಕ್ಕಾ, ಮದೀನ ತಲುಪುವ ಗುರಿಯನ್ನು ಹೊಂದಿದ್ದಾರೆ.   ಚೈನಾ ಸರಕಾರ ಅನುಮತಿ ನೀಡಿದರೆ ಮಾತ್ರ ಅವರ ಹಜ್ಜ್ ಯಾತ್ರೆ ಪೂರೈಸಲು ಸಾಧ್ಯವಾಗಲಿದೆ. ಈ  ಯಾತ್ರೆಯ ಕ್ರಮಿಸುವ ದೂರ 1000 ಕಿ.ಮೀ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.

Join Whatsapp
Exit mobile version