ಹಿಂದೂ ದೇವಾಲಯಗಳ ರಕ್ಷಣೆಗೆ ಹಿಂದೂ ನಾಯಕರ ಸಮಿತಿ ರಚಿಸಿದ ಪಾಕಿಸ್ತಾನ

Prasthutha|

ಇಸ್ಲಾಮಾಬಾದ್: ಹಿಂದೂ ದೇವಾಲಯಗಳ ರಕ್ಷಣಾ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಹಿಂದೂ ನಾಯಕರ ಸಮಿತಿಗೆ ಒಪ್ಪಿಸುವ ನೀತಿಯನ್ನು ಪಾಕಿಸ್ತಾನದ ಸರಕಾರವು ಡಿಸೆಂಬರ್ 29ರಂದು ಜಾರಿಗೆ ತಂದಿದೆ.

- Advertisement -

ಪಾಕಿಸ್ತಾನದಲ್ಲಿ ಈಗಾಗಲೇ ಇರುವ ಪಾಕಿಸ್ತಾನ್ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯಂತೆಯೇ ಪಾಕಿಸ್ತಾನ್ ಹಿಂದೂ ಮಂದಿರ್ ನಿರ್ವಹಣಾ ಸಮಿತಿಯನ್ನು ಧಾರ್ಮಿಕ ವ್ಯವಹಾರ ಸಚಿವಾಲಯವು ರಚಿಸಿದೆ.

ಧಾರ್ಮಿಕ ವ್ಯವಹಾರ ಸಚಿವ ಪೀರ್ ನೂರುಲ್ ಹಕ್ ಖಾದ್ರಿ ಅವರ ಅಧ್ಯಕ್ಷತೆಯಲ್ಲಿ ಮೊದಲ ಪಾಕಿಸ್ತಾನ್ ಹಿಂದೂ ಮಂದಿರ ನಿರ್ವಹಣಾ ಸಮಿತಿಯ ಸಭೆ ನಡೆದಿದೆ ಎಂದು ಅಧಿಕೃತ ಹೇಳಿಕೆ ಹೊರಡಿಸಲಾಗಿದೆ.

- Advertisement -

ಇಟಿಪಿಬಿ- ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಮಂಡಳಿಯ ಅಧ್ಯಕ್ಷ ಆಸಿಫ್ ಹಶ್ಮಿ ಅವರ ಮೊದಲ ಸಭೆಯ ವಿವರಗಳನ್ನು ನೀಡಿದ್ದಾರೆ. ದೇಶ ವಿಭಜನೆ ಆದಾಗ ಭಾರತಕ್ಕೆ ಹೋದ ಹಿಂದೂ ಮತ್ತು ಸಿಖ್ ಜನರ ಧಾರ್ಮಿಕ ಸ್ವತ್ತು ಮತ್ತು ಆಲಯಗಳನ್ನು ನಿರ್ವಹಿಸುವ ಸ್ವಾಯುತ್ತ ಸಂಸ್ಥೆಯಾಗಿದೆ ಇಟಿಪಿಬಿ.

ಸಮಿತಿಯು ಹಿಂದೂ ಪೂಜಾಲಯಗಳ ಸಂಬಂಧಿ ವಿಷಯಗಳನ್ನು ಗಮನಿಸುವ ಜವಾಬ್ದಾರಿ ಹೋದಿರುತ್ತದೆ ಎಂದು ಖಾದ್ರಿ ತಿಳಿಸಿದರು.

ದಿವಾನ್ ಚಂದ್ ಚಾವ್ಲಾ, ಹಾರೂನ್ ಸರಾಬ್ ದಯಾಳ್, ಮೋಹನ್ ದಾಸ್, ನಾರಂಜನ್ ಕುಮಾರ್, ಮೇಘಾ ಅರೋರಾ, ಅಮಿತ್ ಶಾದಾನಿ, ಅಶೋಕ್ ಕುಮಾರ್, ವೆರ್ಸಿ ಮಿಲ್ ದೇವಾನಿ, ಅಮರ್ ನಾಥ್ ರಾಂಧವಾ ಇರುವ ಸಮಿತಿಗೆ ಕೃಷ್ಣ ಶರ್ಮಾ ಅವರು ಮುಖ್ಯಸ್ಥರಾಗಿದ್ದಾರೆ.

ಪಾಕಿಸ್ತಾನ ಸರಕಾರವು ಇಲ್ಲಿನ ಹಿಂದೂಗಳ ಬಹು ದಿನಗಳ ಬೇಡಿಕೆಯನ್ನು ಈ ಸಮಿತಿ ರಚಿಸುವ ಮೂಲಕ ಈಡೇರಿಸಿದೆ ಎಂದು ಶರ್ಮಾ ಹೇಳಿದರು.

ಪಾಕಿಸ್ತಾನದ ಮುಸ್ಲಿಮೇತರರ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಲಾಗುವುದು. ಈ ಸಮಿತಿ ರಚನೆಯ ಉದ್ದೇಶ ಪಾಕಿಸ್ತಾನಿ ಹಿಂದೂ ಸಮುದಾಯದವರ ಸಮಸ್ಯೆಗಳನ್ನೂ ಅವರೇ ಕೂತು ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿದೆ ಎಂದು ಖಾದ್ರಿ ತಿಳಿಸಿದರು.

ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಭಿನ್ನತೆ ಇದ್ದರೂ ತಾಳ್ಮೆ ಮತ್ತು ಸಂಯಮದಿಂದ ಪರಸ್ಪರ ಒಪ್ಪಿಕೊಳ್ಳುವುದು ಗೌರವಿಸುವುದು ಮಾನವೀಯತೆಯಾಗಿದೆ. ಪಾಕಿಸ್ತಾನದಲ್ಲಿ ಧರ್ಮ, ಜನಾಂಗ, ಭಾಷೆ ಎಂದು ಜಗಳಕ್ಕೆ ನಿಲ್ಲುವವರು ಇಲ್ಲ ಎಂದೂ ಸಚಿವರು ಹೇಳಿದರು.

“ಈ ಸಮಿತಿಯು ದೇಶದ ಮುಸ್ಲಿಮೇತರರ ನಡುವೆ ಸೇತುವೆಯಾಗಿ ಕಾರ್ಯವೆಸಗುತ್ತದೆ” ಎಂದೂ ಅವರು ಹೇಳಿದರು.

ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಆಶಯದಂತೆ ದೇಶದ ಮುಸ್ಲಿಮೇತರರ ಒಳಿತಿಗಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.

Join Whatsapp